ಇಸ್ಲಾಮಾಬಾದ್ (ಏಜೆನ್ಸಿ) :ಬಾಂಬ್ ದಾಳಿಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸ್ಥಳೀಯ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ರಿಗೆ ಕ್ಷಮದಾನ ನೀಡಬೇಕು ಎಂಬುದು ಪಾಕ್ ಪ್ರಧಾನಿ ಯೂಸುಪ್ ರಾಜಾ ಗಿಲಾನಿಯ ವೈಯಕ್ತಿಕ ಅಭಿಪ್ರಾಯವಾಗಿದ್ದು, ಆತನ ಪ್ರಕರಣವನ್ನು ಮರು ಪರಿಶೀಲಿಸುವಂತೆ ಅಧ್ಯಕ್ಷ ಪರ್ವೇಜ್ ಮುಷರಫ್ರನ್ನು ಕೋರಿದ್ದಾರೆ.
ಸರಬ್ಜಿತ್ ಸಿಂಗ್ ಗಲ್ಲನ್ನು ತಡೆಯಬೇಕು ಎಂಬುದಾಗಿ ತಾನು ಅಧ್ಯಕ್ಷರಿಗೆ ಸಲಹೆ ನೀಡಿದ್ದೆ ಮತ್ತು ಈ ಪ್ರಕರಣವನ್ನು ಆಂತರಿಕ ಸಚಿವಾಲಯ, ವಿದೇಶಿ ವ್ಯವಹಾರ, ಕಾನೂನು ಮತ್ತು ನ್ಯಾಯಾಂಗ ಹಾಗೂ ಮಾನವ ಹಕ್ಕು ಸಚಿವಾಲಯಗಳು ಮರು ಪರಿಶೀಲಿಸಬೇಕೆಂದು ತಿಳಿಸಿದ್ದೇನೆ ಎಂದು ಗಿಲಾನಿ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಈ ಕಾರಣದಿಂದ ಸರಬ್ಜಿತ್ ಸಿಂಗ್ರ ಗಲ್ಲು ಶಿಕ್ಷೆಯನ್ನು ಮುಂದಕ್ಕೆ ಹಾಕಲಾಯಿತು ಎಂದು ಗಿಲಾನಿ ತಿಳಿಸಿದರು.
ಸರಬ್ಜಿತ್ ಸಿಂಗ್ನಿಗೆ ಕ್ಷಮದಾನ ನೀಡಬೇಕೇ ಎಂದು ಕೇಳಿದ ಪ್ರಶ್ನೆಗೆ ಗಿಲಾನಿ, ಈ ಕಾರಣದಿಂದಲೇ ತಾನು ಅಧ್ಯಕ್ಷರಿಗೆ ಸಲಹೆ ನೀಡಿದ್ದೇನೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸಚಿವಾಲಯಗಳಿಗೆ ಬಿಟ್ಟ ವಿಷಯ ಎಂದು ಉತ್ತರಿಸಿದರು.
ಸರಬ್ಜಿತ್ ಸಿಂಗ್ಗೆ ಕ್ಷಮದಾನ ನೀಡವುದಕ್ಕಾಗಿ ಪುನರ್ವಿಮರ್ಶೆಗೆ ಕೋರಿದ್ದೀರೋ ಎಂಬ ಪ್ರಶ್ನೆಗೆ ಅವರು, ಸಚಿವಾಲಯಗಳು ಈ ವಿಷಯವಾಗಿ ಯೋಚಿಸಲಿದ್ದು, ಈ ಪ್ರಕರಣ ತಕ್ಕುದಾದುದೇ ಅಥವಾ ಅಲ್ಲವೇ ಎಂಬುದನ್ನು ಅವರು ಪರಿಗಣಿಸಲಿದ್ದಾರೆ ಮತ್ತು ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.
|