ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಕುರಿತ ಪುರಾವೆಗಳನ್ನು ಗೃಹಸಚಿವ ಪಿ. ಚಿದಂಬರಂ ಅಮೆರಿಕಾಕ್ಕೆ ಒದಗಿಸುವ ಹೇಳಿಕೆಯ ನಂತರ ಪಾಕಿಸ್ತಾನವು, 'ಭಾರತದ ಜತೆ ನಾವು ಯಾವುದೇ ಗಡಿಪಾರು ಕರಾರು ಹೊಂದಿಲ್ಲವಾದ ಕಾರಣ ಹಸ್ತಾಂತರದ ಪ್ರಶ್ನೆಯೇ ಇಲ್ಲ' ಎಂದು ತನ್ನ ಹೇಳಿಕೆಯನ್ನು ಪುನರುಚ್ಛರಿಸಿದ್ದು ಉದ್ಧಟತನ ಮುಂದುವರಿಸಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಭಾರತ ಪೂರಕ ಸಾಕ್ಷ್ಯವನ್ನೊದಗಿಸಿದಲ್ಲಿ ಪಾಕಿಸ್ತಾನವು ತನ್ನ ನೆಲದಲ್ಲಿ ವಿಚಾರಣೆಗೆ ಅವಕಾಶ ನೀಡುತ್ತದೆ ಎಂಬ ವರದಿಗಳನ್ನು ಖುರೇಷಿ ತಳ್ಳಿ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ. ನಮ್ಮ ಪ್ರಜೆಗಳನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಪಾಕಿಸ್ತಾನ ಮಣಿಯುವುದಿಲ್ಲ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಒತ್ತಡಗಳು ಎರಡು ದೇಶಗಳ ನಡುವಿನ ಬಿಗುವಿನ ವಾತಾವರಣವನ್ನು ಕಡಿಮೆ ಮಾಡಿವೆ. ಯುದ್ಧವನ್ನು ತಪ್ಪಿಸಲು ಪಾಕಿಸ್ತಾನ ಮತ್ತು ಭಾರತಗಳು ಯತ್ನಿಸುತ್ತಿವೆ ಎಂದು ಮುಲ್ತಾನ್ನಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಷಿ ತಿಳಿಸಿದ್ದಾರೆ.
"ನಾವು ಅಮೆರಿಕಾದ ಜತೆ ಗಡಿಪಾರು ಒಪ್ಪಂದ ಹೊಂದಿದ್ದೇವೆ. ಭಾರತದೊಂದಿಗೆ ಅಂತಹ ಯಾವುದೇ ಒಪ್ಪಂದವಿಲ್ಲ. ಇವೆರಡನ್ನೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾಗಿ ಶಂಕಿತರನ್ನು ಭಾರತಕ್ಕೆ ಹಸ್ತಾಂತರಿಸುವ ಯಾವುದೇ ಸಾಧ್ಯತೆಗಳಿಲ್ಲ" ಎಂದು ಅವರು ಹೇಳಿದರು.
ಮುಂಬೈ ದಾಳಿ ಹಿಂದೆ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿರುವ ಬಗೆಗಿನ ಅಮೂಲಾಗ್ರ ಸಾಕ್ಷ್ಯಗಳನ್ನು ಹಿಡಿದುಕೊಂಡು ಮುಂದಿನ ವಾರ ಅಮೆರಿಕಾಕ್ಕೆ ಭಾರತದ ಗೃಹಸಚಿವ ಪಿ. ಚಿದಂಬರಂ ತೆರಳಲಿದ್ದಾರೆ ಎಂಬುದು ಖಚಿತವಾದ ನಂತರ ಖುರೇಷಿಯವರಿಂದ ಈ ಹೇಳಿಕೆ ಹೊರಬಂದಿದೆ.
ಇದೇ ವೇಳೆ ಕಾಶ್ಮೀರ ವಿಚಾರ ಮತ್ತು ಮುಂಬೈ ಘಟನೆಗಳಿಗೆ ಸಂಬಂಧವಿಲ್ಲ ಎಂದ ಅವರು, ಮುಂಬೈಯದ್ದು ಭಯೋತ್ಪಾದನೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಭಾರತವೂ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲೂ ಉಗ್ರರ ಕೃತ್ಯಗಳಿಗೆ ನಾವು ಬೆಂಬಲ ನೀಡುವುದಿಲ್ಲ. ನಾವು ನೆರೆಯ ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ಬಯಸುತ್ತಿದ್ದೇವೆ ಎಂದು ಖುರೇಷಿ ತಿಳಿಸಿದರು.
|