ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜನೀತಿ ಎಂಬಂತೆ ಬಳಸುತ್ತಿದೆ ಎಂಬ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಾಕ್, ಇದೊಂದು ದುರದೃಷ್ಟಕರ ಹೇಳಿಕೆಯಾಗಿದೆ ಎಂದಿದೆ.
ಪ್ರಧಾನಿ ಸಿಂಗ್ ಅವರು ದುರದೃಷ್ಟಕರ ಹೇಳಿಕೆ ನೀಡಿರುವುದಾಗಿ ತಾವು ನಂಬುವುದಾಗಿ ಪಾಕ್ ಪ್ರಧಾನಿ ನ್ಯಾಶನಲ್ ಸೆಕ್ಯುರಿಟಿಯ ಸಲಹೆಗಾರ ಮೊಹಮದ್ ಅಲಿ ದುರ್ರಾನಿ ಅವರು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ಎರಡೂ ದೇಶಗಳೂ ಆರೋಪ-ಪ್ರತ್ಯಾರೋಪ ಆಟಗಳಲ್ಲಿ ತೊಡಗುವುದು ಬೇಡು ಎಂದು ಸಲಹೆ ನೀಡಿರುವ ದುರ್ರಾನಿ, ಮುಂಬೈ ದಾಳಿಯ ಕುರಿತು ಪಾಕಿಸ್ತಾನ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ಉತ್ತರ ನೀಡುವುದಾಗಿ ಅವರು ಡಾನ್ ನ್ಯೂಸ್ ಚಾನೆಲ್ಗೆ ತಿಳಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜನೀತಿ ಎಂಬಂತೆ ಬಳಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೂರಿದ್ದರು.
ಪಾಕಿಸ್ತಾನದ ವಿರುದ್ಧ ಕಠಿಣ ಶಬ್ದಗಳನ್ನು ಬಳಸಿದ ಅವರು, ಪಾಕಿಸ್ತಾನ ಯುದ್ಧೋನ್ಮಾದವನ್ನು ಸೃಷ್ಟಿಸುತ್ತಿದೆ ಎಂದೂ ಆರೋಪಿಸಿದರು. ಮುಂಬೈದಾಳಿಯಲ್ಲಿ ಲಷ್ಕರೆ ಸಂಘಟನೆಯ ಕೈವಾಡ ಸ್ಪಷ್ಟ ಎಂದು ಹೇಳಿದ ಪ್ರಧಾನಿ ಇಂತಹ ದಾಳಿಯ ಹಿಂದೆ ಪಾಕಿಸ್ತಾನದ ಅಧಿಕಾರಗಳ ಸಹಾಯವಿರಬಹುದು ಎಂದೂ ಹೇಳಿದ್ದರು.
ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ಸ್ವರ್ಗವಾಗಿದೆ ಮತ್ತು ಉಗ್ರಗಾಮಿ ಶಕ್ತಿಗಳಿಗೆ ಅಭಯಧಾಮವಾಗಿದೆ ಎಂದೂ ಅವರು ಟೀಕಿಸಿದ್ದರು. |