ವಾಣಿಜ್ಯ ನಗರಿ ಎನಿಸಿಕೊಂಡ ಮುಂಬೈ ದಾಳಿಯ ನಂತರ ತಾನು ತನಿಖೆಗೆ ಸಹಕರಿಸುವ ನಿಟ್ಟಿನಲ್ಲಿ ಭಾರತಕ್ಕೆ ಭೇಟಿ ನೀಡುವ ಇಚ್ಛೆ ಹೊಂದಿದ್ದೆ ಎಂದು ಪಾಕ್ ಐಎಸ್ಐ(ಇಂಟರ್ ಸರ್ವಿಸ್ ಇಂಟೆಲಿಜೆನ್ಸ್)ವರಿಷ್ಠ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶೂಜಾ ಪಾಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆರೆಯ ಭಾರತದೊಂದಿಗೆ ಸಮರವಿಲ್ಲದೆ, ಬಿಕ್ಕಟ್ಟನ್ನು ಪರಿಹರಿಸಬೇಕು ಎಂಬುದಾಗಿ ಪಾಕ್ನ ದಿ ನೇಷನ್ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಪಾಶಾ, ಆ ನಿಟ್ಟಿನಲ್ಲಿ ಭಾರತದೊಂದಿಗೆ ಸಂಘರ್ಷ ಅನಗತ್ಯ ಎಂದು ಹೇಳಿದ್ದಾರೆ.
ಆದರೆ ಮುಂಬೈ ದಾಳಿಯ ಹಿಂದೆ ಐಎಸ್ಐ ಬೆಂಬಲದೊಂದಿಗೆ ಭಯೋತ್ಪಾದನೆ ನಡೆಸಲಾಗಿದೆ ಎಂಬ ಬಗ್ಗೆ ಭಾರತ ನಿಖರವಾದ ಸಾಕ್ಷ್ಯ ನೀಡಲು ವಿಫಲವಾಗಿದೆ ಎಂದು ದೂರಿರುವ ಅವರು, ಪುರಾವೆಗೆ ಅಗತ್ಯವಾಗಿರುವ ದೂರವಾಣಿ ಸಂಖ್ಯೆಗಳಾಗಲಿ, ಕೈವಾಡದ ಕುರಿತಾಗಲಿ, ಖಚಿತ ಹೆಸರನ್ನೂ ನೀಡಿಲ್ಲ ಎಂದು ತಿಳಿಸಿದ್ದಾರೆ.
ದಾಳಿಯ ಕುರಿತಾಗಿ ಭಾರತ ಅನಾವಶ್ಯಕವಾಗಿ ಪಾಕ್ ಮೇಲೆ ಗೂಬೆ ಕೂರಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ಹಾಗಂತ ನಾವು ಪೂರ್ಣವಾಗಿ ಉಗ್ರಗಾಮಿ ಚಟುವಟಿಕೆಯನ್ನು ನಿರಾಕರಿಸುವುದಿಲ್ಲ. ಆದರೆ ಭಯೋತ್ಪಾದನೆ ಎಂಬುದು ನಮ್ಮ ಶತ್ರು ವಿನಃ, ಭಾರತವಲ್ಲ.
ಮುಂಬೈ ದಾಳಿಯ ನಂತರ ಭಾರತಕ್ಕೆ ಐಎಸ್ಐ ವರಿಷ್ಠರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಪಾಕ್ ಹೇಳಿತ್ತಾದರೂ, ಬಳಿಕ ಐಎಸ್ಐ ಮುಖ್ಯಸ್ಥರನ್ನು ಕಳುಹಿಸುವುದಿಲ್ಲ ಎಂದು ರಾಗ ಬದಲಿಸಿತ್ತು. |