ಮುಂಬೈ ದಾಳಿಯ ಹಿಂದೆ ಪಾಕ್ ನೆಲದ ಉಗ್ರಗಾಮಿ ಸಂಘಟನೆಗಳು ಶಾಮೀಲಾಗಿರುವ ಕುರಿತು ಭಾರತ ಪಾಕಿಸ್ತಾನಕ್ಕೆ ಹಸ್ತಾಂತರಿಸಿರುವ ಪುರಾವೆಗಳ ಬಗ್ಗೆಯೇ ಸೂಕ್ತ ತನಿಖೆ ನಡೆಸಲು ಪಾಕ್ ನಿರ್ಧರಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.
ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಮಂಗಳವಾರ ನಡೆಸಿದ ಸಭೆಯಲ್ಲಿ, ಭಾರತ ದಾಳಿಯ ಕುರಿತು ನೀಡಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆಯ ಕುರಿತಾಗಿ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ದಿ ನ್ಯೂಸ್ ಡೈಲಿ ವರದಿ ವಿವರಿಸಿದೆ.
ಆ ನಿಟ್ಟಿನಲ್ಲಿ ಪಾಕಿಸ್ತಾನದ ತನಿಖಾಧಿಕಾರಿಗಳು ಭಾರತದ ಪುರಾವೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲು ಜರ್ದಾರಿ ಮತ್ತು ಗಿಲಾನಿ ಒಮ್ಮತದ ನಿಲುವು ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಅಲ್ಲದೇ ತಮ್ಮ ತನಿಖೆಯಲ್ಲಿ ಯಾರೇ ತಪ್ಪಿತಸ್ಥರು ಎಂದು ಸಾಬೀತಾದಲ್ಲಿ, ಪಾಕಿಸ್ತಾನ ನೆಲದ ಕಾನೂನಿನ್ವಯವೇ ಶಿಕ್ಷೆ ವಿಧಿಸಲಾಗುತ್ತದೆಯೇ ವಿನಃ, ಯಾರನ್ನೂ ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಜರ್ದಾರಿ ಮತ್ತು ಗಿಲಾನಿ ಪುನರುಚ್ಚರಿಸಿದ್ದಾರೆ.
ಮುಂಬೈಯ ದಾಳಿಯ ಹಿಂದೆ ಪಾಕ್ ಐಎಸ್ಐ ಕೈವಾಡ ಇದೆ ಎಂಬ ಭಾರತದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕ್ ನಡುವೆ ಬಿರುಸಿನ ವಾಗ್ದಾಳಿ ನಡೆದಿತ್ತು. ಅಲ್ಲದೇ ಪಾಕ್ ಭಯೋತ್ಪಾದನೆಯನ್ನು ರಾಜನೀತಿಯಂತೆ ಪೋಷಿಸುತ್ತಿದೆ ಎಂಬ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಭಿಪ್ರಾಯಕ್ಕೆ ಪಾಕಿಸ್ತಾನ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
|