ಕಸಬ್ ಪಾಕ್ ಪ್ರಜೆ ಎಂದು ಹೇಳಿಕೆ ನೀಡಿ ಇರಿಸುಮುರಿಸಿಗೆ ಸಿಲುಕಿಸಿದ್ದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿವೃತ್ತ ಮೇಜರ್ ಜನರಲ್ ಮಹಮದ್ ಅಲಿ ದುರಾನಿಗೆ ಗೇಟ್ಪಾಸ್ ನೀಡಲಾಗಿದೆ.
ಮುಂಬೈ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ನ ಕುರಿತಾಗಿ ಕೊನೆಗೂ ಪಾಕಿಸ್ತಾನ, ಆತ ನಮ್ಮ ದೇಶದ ಪ್ರಜೆ ಹೌದೆಂದು ಒಪ್ಪಿಕೊಂಡಿದೆ.
ಬಹಳಷ್ಟು ನಾಟಕ, ಇಬ್ಬಗೆಯ ಹೇಳಿಕೆಯ ಮೂಲಕ ಕಸಬ್ ತಮ್ಮ ದೇಶದವನೆಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿತ್ತು. ಅಲ್ಲದೇ ಮುಂಬೈ ದಾಳಿಯ ಹಿಂದೆ ಪಾಕ್ ನೆಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದ ಶಾಮೀಲಾತಿಗೆ ಬಗ್ಗೆ ಭಾರತ ಸಾಕಷ್ಟು ಪುರಾವೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು.
ಆದರೆ ಭಾರತ ನೀಡಿದ ಸಾಕ್ಷಿ ನಂಬಲರ್ಹವಾದುದಲ್ಲ ಎಂದು ಪಾಕಿಸ್ತಾನ ರಾಗ ಬದಲಿಸುವ ಮೂಲಕ ಕಪಟ ನಾಟಕ ಆರಂಭಿಸಿತ್ತು. ಭಾರತ ನೀಡಿದ ಪುರಾವೆ ಬಗ್ಗೆಯೇ ಸೂಕ್ತ ತನಿಖೆ ನಡೆಸಲಾಗುವುದು ಎಂದು ಪಾಕ್ ತಿಳಿಸಿತ್ತು.
ಆದರೆ ಪಾಕ್ ಭದ್ರತಾ ಸಲಹೆಗಾರ ದುರಾನಿ ಕಸಬ್ ಪಾಕ್ ಪ್ರಜೆಯೇ ಹೌದೆಂದು ಹೇಳಿಕೆ ನೀಡುವ ಮೂಲಕ ತೀವ್ರ ಮುಖಭಂಗಕ್ಕೀಡಾಗಿದೆ. ಆ ನಿಟ್ಟಿನಲ್ಲಿ ದುರಾನಿ ಬೇಜವ್ದಾರಿಯುತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಯೂಸೂಫ್ ರಾಜಾ ಗಿಲಾನಿ ಅವರ ಕಚೇರಿ ಮೂಲಗಳು ಹೇಳಿಕೆ ನೀಡಿದೆ. |