ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದಲ್ಲಿನ ಭಾರತೀಯ ಮೂಲದ ಅರ್ಚಕರ ವಜಾದ ಹಿಂದೆ ಯಾವುದೇ ಧಾರ್ಮಿಕ ಅಥವಾ ಸಂಪ್ರದಾಯದ ಕಾಳಜಿ ಇಲ್ಲ, ಅವೆಲ್ಲವೂ ದೇವಾಲಯಕ್ಕೆ ಹರಿದು ಬರುತ್ತಿರುವ ಆದಾಯದ ಮೇಲೆಯೇ ಕೇಂದ್ರಿಕೃತವಾಗಿದೆ ಎಂದು ಮಾವೋವಾದಿ ಸರ್ಕಾರದ ಕ್ರಮದ ವಿರುದ್ಧ ಅಧಿಕಾರಿಗಳು ಮತ್ತು ಭಕ್ತರು ಹರಿಹಾಯ್ದಿದ್ದಾರೆ.
ನೇಪಾಳದ ಆಡಳಿತಾರೂಢ ಮಾವೋವಾದಿ ಸರ್ಕಾರ, ಕಳೆದ 300ವರ್ಷಗಳಿಂದಲೂ ಪಶುಪತಿನಾಥ ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ (ಕರ್ನಾಟಕ)ಮೂಲದ ಅರ್ಚಕರನ್ನು ವಜಾಗೊಳಿಸಿ, ನೇಪಾಳಿ ಅರ್ಚಕರನ್ನು ನೇಮಿಸಿರುವುದು ವಿವಾದದ ಕಿಡಿ ಹೊತ್ತಿಕೊಂಡಿದೆ.
ಕಳೆದ ವರ್ಷ ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ನೇತೃತ್ವದ ನಾಸ್ತಿಕವಾದಿ ಎಡಪಂಥೀಯ ಪಕ್ಷಗಳು ಭರ್ಜರಿ ಜಯಭೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿದಿತ್ತು. ಅಲ್ಲದೇ ಎರಡು ಶತಮಾನಗಳ ಕಾಲದ ಹಿಂದೂ ಸಂಪ್ರದಾಯದ ನೇಪಾಳಿ ಅರೆಸೊತ್ತಿಗೆ ಆಡಳಿತವನ್ನು ಕಿತ್ತೊಗೆದಿತ್ತು.
ಇದೀಗ ಆಡಳಿತದಲ್ಲಿರುವ ಮಾವೋವಾದಿ ಸರ್ಕಾರ ಪಶುಪತಿನಾಥ ಹಿಂದೂ ದೇವಾಲಯದಲ್ಲಿನ ಭಾರತೀಯ ಅರ್ಚಕರನ್ನು ವಜಾಗೊಳಿಸಿ, ನೇಪಾಳಿ ಅರ್ಚಕರನ್ನು ನೇಮಕ ಮಾಡಿತ್ತು.
ಆ ನಿಟ್ಟಿನಲ್ಲಿ ಮಾವೋವಾದಿ ಸರ್ಕಾರದ ನಿಲುವಿನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇವೆಲ್ಲವೂ ದೇವಾಲಯದ ಆದಾಯಕ್ಕಾಗಿಯೇ ಮಾಡುತ್ತಿರುವುದಾಗಿ ಹರಿಹರ್ ದಾಕಲ್ ಗಂಭೀರವಾಗಿ ಆರೋಪಿಸಿದ್ದಾರೆ. |