ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದಿಂದ ವಜಾಗೊಳಿಸಿದ್ದ ಭಾರತೀಯ (ಕರ್ನಾಟಕ) ಮೂಲದ ಅರ್ಚಕರನ್ನು ತೀವ್ರ ಪ್ರತಿಭಟನೆಯ ನಂತರ ಮಾವೋವಾದಿ ಪ್ರಧಾನಿ ಪ್ರಚಂಡ ಅವರು ಮರುನೇಮಕಗೊಳಿಸಿದ್ದಾರೆ.ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯತೀತ ಮಾವೋವಾದಿಗಳು ಭರ್ಜರಿ ಜಯಗಳಿಸಿ, ಆಡಳಿತ ಚುಕ್ಕಾಣಿ ಹಿಡಿದಿದ್ದರು. ಸುಮಾರು 300ವರ್ಷಗಳಿಂದಲೂ ಪಶುಪತಿನಾಥ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ಭಾರತೀಯ ಅರ್ಚಕರನ್ನು ಮಾವೋವಾದಿ ಸರ್ಕಾರ ಕಳೆದ ವಾರ ವಜಾಗೊಳಿಸಿ,ನೇಪಾಳಿ ಪುರೋಹಿತರನ್ನು ನಿಯೋಜಿಸಿತ್ತು.ಆದರೆ ಮಾವೋವಾದಿ ಸರ್ಕಾರದ ಧೋರಣೆ ವಿರುದ್ಧ ನೇಪಾಳಿಗರು ಸೇರಿದಂತೆ ಹಿಂದೂಗಳ ತೀವ್ರ ಪ್ರತಿಭಟನೆ ಹಾಗೂ ನೇಪಾಳ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಭಾರತೀಯ ಅರ್ಚಕರು ಮತ್ತೆ ತಮ್ಮ ಸ್ಥಾನಕ್ಕೆ ಮರಳುವಂತಾಗಿದೆ.ಈ ಬಗ್ಗೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಅವರು,ಪಶುಪತಿನಾಥ ದೇವಾಲಯದಲ್ಲಿ ಭಾರತೀಯ ಅರ್ಚಕರೇ ಯಥಾಪ್ರಕಾರ ಪೂಜಾ ವಿಧಿಗಳನ್ನು ನೇರವೇರಿಸುವಂತೆ ಅಧಿಕಾರಿಗಳಿಗೆ ಗುರುವಾರ ಅಸೆಂಬ್ಲಿಯಲ್ಲಿ ಸೂಚನೆ ನೀಡುವ ಮೂಲಕ ವಿವಾದವನ್ನು ಶಮನಗೊಳಿಸಿದ್ದಾರೆ.ಈ ನಿರ್ಧಾರ ನಿಜಕ್ಕೂ ಪ್ರಪಂಚದ ಹಿಂದೂಗಳಿಗೆ ದೊರೆತ ಜಯವಾಗಿದೆ ಎಂದು ಪ್ರಮುಖ ಅರ್ಚಕರಾದ ಓಂ ಶಿವ ರಾಜ್ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಾವೋ ಸರ್ಕಾರದ ನಿಲುವು ಕಾನೂನು ಬಾಹಿರ ಹಾಗೂ ಸ್ಥಳೀಯ ಪುರೋಹಿತರನ್ನು ಕಡೆಗಣಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ತಿಳಿಸಿದ್ದಾರೆ. |