ಪಾಕಿಸ್ತಾನದ ಪ್ರಕ್ಷುಬ್ಧ ಸ್ವಾತ್ ಕಣಿವೆಯಲ್ಲಿ ಉಗ್ರಗಾಮಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ತಾಲಿಬಾನ್ ಕಮಾಂಡರ್ ಮೌಲಾನಾ ಫಜಲುಲ್ಲಾ ತೀವ್ರವಾಗಿ ಗಾಯಗೊಂಡಿದ್ದಾನೆಂದು ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಬುಧವಾರ ತಿಳಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಯಿಂದ ಬಹುತೇಕ ತಾಲಿಬಾನ್ ನಾಯಕರು ಅಡಗಿಕೊಂಡಿದ್ದು, ಅವರ ಅಡಗುತಾಣಗಳನ್ನು ಪತ್ತೆ ಹಚ್ಚಿ ಹೊರಕ್ಕೆ ತರಲಾಗುವುದು ಎಂದು ಮಲಿಕ್ ತಿಳಿಸಿದರು.
ಈ ಉಗ್ರಗಾಮಿಗಳು ದಕ್ಷಿಣ ವಾಜಿರಿಸ್ತಾನದಲ್ಲಿ ಕುಳಿತುಕೊಂಡು ಅಲ್ಲಿಂದ ಭಯೋತ್ಪಾದನೆ ಚಟುವಟಿಕೆ ಯೋಜಿಸಿದ್ದಾರೆ. ನಾನು ಅವರನ್ನು ತಾಲಿಬಾನ್ ಎಂದು ಕರೆಯುವುದಿಲ್ಲ. ಅವರನ್ನು ಝಾಲಿಮಾನ್(ದುಷ್ಕರ್ಮಿಗಳು) ಎಂದು ಕರೆಯುವುದಾಗಿ ಮಲಿಕ್ ಸಂದರ್ಶನದಲ್ಲಿ ತಿಳಿಸಿದರು.
ತೆಹ್ರಿಕ್-ಎ-ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹಸೂದ್ ಮೇಲೆ ಗುರಿಯಿರಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಉಗ್ರಗಾಮಿ ಬಣಗಳಲ್ಲಿ ಐಕ್ಯತೆ ಮೂಡಿದ್ದು, ಅದನ್ನು ಸರ್ಕಾರ ಮುಂಚೆಯೇ ನಿರೀಕ್ಷಿಸಿತ್ತು ಎಂದು ಮಲಿಕ್ ಹೇಳಿದರು.ಸರ್ಕಾರದ ಪರವೆಂದು ಹೇಳಲಾಗಿದ್ದ ಉಗ್ರಗಾಮಿ ಬಣವೊಂದರ ನಾಯಕ ಹಫೀಜ್ ಗುಲ್ ಬಹಾದುರ್ ಉತ್ತರ ವಾಜಿರಿಸ್ತಾನದಲ್ಲಿ ಶಾಂತಿ ಒಪ್ಪಂದವನ್ನು ರದ್ದುಮಾಡಿ, ಬುಡಕಟ್ಟು ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಮತ್ತೆ ಕಾರ್ಯೋನ್ಮುಖನಾಗಿದ್ದಾನೆ.
ಗುಲ್ ಬಹಾದುರ್ ಆಗಿರಲಿ ಅಥವಾ ಕಮಾಂಡರ್ ನಜೀರ್ ಆಗಿರಲಿ ಅಥವಾ ಖಾರಿ ಹುಸೇನ್, ಬೈತುಲ್ಲಾ ಅಥವಾ ಹಕೀಮುಲ್ಲಾ(ಮೆಹಸೂದ್) ಆಗಿರಲಿ ಎಲ್ಲರೂ ಒಂದೇ ಮರದ ಕೊಂಬೆಗಳು. ಎಲ್ಲರೂ ಕಟ್ಟಾ ಭಯೋತ್ಪಾದಕರಾಗಿದ್ದು, ತಾಲಿಬಾನ್ ಬದಲಿಗೆ ಝಾಲಿಮಾನ್ ಎಂದು ಕರೆಯಲು ಸೂಕ್ತವಾಗಿದ್ದಾರೆಂದು ಮಲಿಕ್ ಟೀಕಿಸಿದರು. |