ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಗುರುವಾರ ನಡೆದ ಭೀಕರ ಕಾರ್ ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತಿದ್ದು, ಭಾರತದ ರಾಯಭಾರ ಕಚೇರಿ ತಮ್ಮ ಗುರಿಯಾಗಿತ್ತೆಂದು ಹೇಳಿದ್ದಾರೆ.
ಸಂಘಟನೆಯ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ದಾಳಿಕೋರ ಆಫ್ಘನ್ ವ್ಯಕ್ತಿಯಾಗಿದ್ದು, ರಾಯಭಾರ ಕಚೇರಿಯ ಹೊರಕ್ಕೆ ಸ್ಪೋಟಕ ತುಂಬಿದ್ದ ಸ್ಫೋರ್ಟಿ ಯುಟಿಲಿಟಿ ವಾಹನವನ್ನು ಸ್ಫೋಟಿಸಿದನೆಂದು ತಿಳಿಸಿದ್ದಾನೆ. ಇದಕ್ಕೆ ಮುಂಚೆ, ಆತ್ಮಾಹುತಿ ದಾಳಿಯು ಭಾರತದ ರಾಯಭಾರ ಕಚೇರಿಯತ್ತ ಗುರಿಮಾಡಲಾಗಿತ್ತೆಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಿಳಿಸಿದ್ದಾರೆ. ಆತ್ಮಾಹುತಿ ಮಾನವ ಬಾಂಬರ್ ರಾಯಭಾರ ಕಚೇರಿಯ ಹೊರಗಿನ ಗೋಡೆಯ ಬಳಿಕ ಸ್ಪೋಟಕಗಳನ್ನು ತುಂಬಿದ್ದ ಕಾರಿನಲ್ಲಿ ಎಂಬಸಿಯ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದನೆಂದು ನಿರುಪಮಾ ರಾವ್ ಹೇಳಿದ್ದಾರೆ. ರಾಯಭಾರ ಕಚೇರಿಯ ಕಟ್ಟಡದಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಎಂಬಸಿಯ ಹೊರಗೆ ಕಾವಲು ಕಾಯುತ್ತಿದ್ದ ಇಂಡೊ-ಟಿಬೆಟ್ ಗಡಿ ಪೊಲೀಸ್ ಮೂವರು ಸಿಬ್ಬಂದಿಗೆ ಬಾಂಬ್ ಸ್ಫೋಟದಿಂದ ಚೂರು ಸಿಡಿದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದೆಯೆಂದು ಅವರು ತಿಳಿಸಿದರು. ಸ್ಫೋಟದಿಂದ ಮಿಷನ್ ಕಣ್ಗಾವಲು ಗೋಪುರ ಚೂರುಚೂರಾಗಿದ್ದು, ವಾಹನಗಳು ನಾಶಗೊಂಡಿದೆ, ಸಾವಿನ ಕರಾಳ ಜಾಡನ್ನು ಬಿಟ್ಟುಹೋಗಿದೆ.