ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಶಾಮೀಲಾಗಿರುವ ಲಷ್ಕರ್ ಇ ತೊಯ್ಬಾದ ಜಾಕಿ ಉರ್ ರೆಹಮಾನ್ ಲಕ್ವಿ ಹಾಗೂ ಇತರ ಆರು ಮಂದಿ ಪಾಕಿಸ್ತಾನಿ ಆರೋಪಿಗಳ ವಿಚಾರಣೆಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್ ಶನಿವಾರ ಮತ್ತೆ ಮುಂದೂಡಿದೆ.
ಮುಂಬೈ ಭಯೋತ್ಪಾದನಾ ದಾಳಿಯ ವಿಚಾರಣೆ ನಡೆಸುತ್ತಿದ್ದ ಭಯೋತ್ಪಾದನಾ ನಿಗ್ರಹ ಕೋರ್ಟ್ಗೆ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಿಲ್ಲವಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು 15 ದಿನಗಳ ಕಾಲ ಮುಂದೂಡಲಾಗಿದೆ. ಸರಕಾರ ಕೂಡ ನೂತನ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ.
2010 ನವೆಂಬರ್ ತಿಂಗಳಲ್ಲಿ ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ಕೋರ್ಟ್ ನಂ-3ರ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ರಾಣಾ ನಿಸಾರ್ ಅಹ್ಮದ್ ಅವರು ಮುಂಬೈ ದಾಳಿಯ ವಿಚಾರಣೆ ನಡೆಸುತ್ತಿದ್ದರು. ಆದರೆ ನ್ಯಾಯಾಧೀಶ ನಿಸಾರ್ ಅವರನ್ನು ದಿಢೀರ್ ಪಂಜಾಬ್ ಪ್ರಾಂತ್ಯದ ಕೋರ್ಟ್ಗೆ ವರ್ಗ ಮಾಡಿ ಲಾಹೋರ್ ಹೈಕೋರ್ಟ್ ಆದೇಶ ಹೊರಡಿಸಿತ್ತು.
ನಿಸಾರ್ ಅವರು ನಡೆಸಿದ ಕೊನೆಯ ವಿಚಾರಣೆ ಜೂನ್ 11. ಇದೀಗ ಭಯೋತ್ಪಾದನಾ ನಿಗ್ರಹ ಕೋರ್ಟ್ಗೆ ನೂತನ ನ್ಯಾಯಾಧೀಶರ ನೇಮಕವಾಗಿಲ್ಲ ಎಂದು ಕೋರ್ಟ್ ಮೂಲಗಳು ತಿಳಿಸಿವೆ. ನ್ಯಾಯಾಧೀಶರ ನೇಮಕವಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.