ಮುಂಬೈ: ಪ್ರಚೋದನಕಾರಿ ಭಾಷಣ ಮಾಡಬಾರದು ಎಂಬ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ, ಮತ್ತೆ ತನ್ನ 'ಶಬ್ಧಗಳ ಯುದ್ಧ'ವನ್ನು ಮುಂದುವರಿಸಿದ್ದು, ಉತ್ತರಭಾರತದವರ ಮೇಲೆ ಹರಿಹಾಯ್ದಿದ್ದಾರಲ್ಲದೆ, ಮಹಾರಾಷ್ಟ್ರದ ಸಂಸ್ಕೃತಿಯನ್ನು 'ನಾಶಪಡಿಸಲು' ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ತನ್ನನ್ನು ಸರಕಾರವು ಬಂಧಿಸಲಿ ಎಂಬ ಸವಾಲು ಹಾಕಿದ ರಾಜ್, ಮಹಾರಾಷ್ಟ್ರದಲ್ಲಿ, ಮಹಾರಾಷ್ಚ್ರ ದಿವಸ ಮಾತ್ರ ಆಚರಿಸಲ್ಪಡಬೇಕು ಎಂದು ನುಡಿದರು.
ಬೇಕಿದ್ದರೆ ಸರಕಾರ ನನ್ನನ್ನು ಬಂಧಿಸಲಿ, ನನಗೇನು ಭಯವಿಲ್ಲ. ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ದಿನ ಮಾತ್ರ ಆಚರಿಸಲ್ಪಡಬೇಕು ಎಂದು ಅವರು ಮರುನುಡಿದರು. ಅವರು ಶನಿವಾರ ಸಾಯಂಕಾಲ ಶಿವಾಜಿ ಪಾರ್ಕ್ನಲ್ಲಿ ನಡೆದ ಎಂಎನ್ಎಸ್ ಪಕ್ಷದ ದ್ವಿತೀಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಮಿತಾಭಾ ಬಚ್ಚನ್ ಮೇಲಿನ ವಾಗ್ದಾಳಿಯನ್ನು ಸಮರ್ಥಿಸಿಕೊಂಡ ಅವರು, ತನ್ನ ವಿರುದ್ಧ ಹೇಳಿಕೆಗಳನ್ನು ನೀಡಿರುವ ಜಯಾಬಚ್ಚನ್ರನ್ನು ಟೀಕಿಸದೆ ಬಿಡಲಿಲ್ಲ. ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್, ಅಮರ್ ಸಿಂಗ್ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು.
ಶಿವಸೇನಾ ಮುಖ್ಯಸ್ಥ ಬಾಳಠಾಕ್ರೆ ಮಾತ್ರ ತನಗೆ ಗೊತ್ತಿರುವ ಠಾಕ್ರೆ ಎಂದು ಜಯಾ ಬಚ್ಚನ್ ಇತ್ತೀಚೆಗೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವುದನ್ನು, ರಾಜ್ ಠಾಕ್ರೆ ಟೀಕಿಸಿದರು.
ಶೀವಾ ಸೇನೆಯಲ್ಲಿ ತನ್ನ ಸಂಬಂಧಿ ಹಾಗೂ ಶಿವಸೇನಾ ಕಾರ್ಯನಿರ್ವಹಣಾಧಿಕಾರಿ ಉದ್ಬವ್ ಠಾಕ್ರೆಯಂದಿಗೆ ಭಿನ್ನಾಭಿಪ್ರಾಯ ಹುಟ್ಟಿದ ಬಳಿಕ ರಾಜ್ ಠಾಕ್ರೆ ಆ ಪಕ್ಷದಿಂದ ಹೊರನಡೆದು ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಹುಟ್ಟುಹಾಕಿದ್ದರು.
|