ಹಿಮಾಚಲ ಪ್ರದೇಶದಲ್ಲಿರುವ ಬಿಲಾಸ್ಪುರದ ನಯನಾದೇವಿ ದೇವಾಲಯದಲ್ಲಿ ಕಾಲ್ತುಳಿತಕ್ತೆ ಸಿಕ್ಕಿ ಸಾವೀಗೀಡಾದವರ ಸಂಖ್ಯೆಯು 145ಕ್ಕೇರಿದ್ದು, ಇದರಲ್ಲಿ 30 ಮಂದಿ ಮಕ್ಕಳೂ ಸೇರಿದ್ದಾರೆ.
ಶಿಮ್ಲಾದಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ನಯನಾದೇವಿ ದೇವಾಲಯಕ್ಕೆ ಶ್ರಾವಣ ಮಾಸದ ಪೂಜೆ ಸಲ್ಲಿಸುವ ಸಲುವಾಗಿ ರವಿವಾರ ಅಂದಾಜು 20,000-25,000 ಭಕ್ತಾದಿಗಳು ಆಗಮಿಸಿದ್ದು ಇದು ನವರಾತ್ರಿ ಸಮಯದಲ್ಲಿ ಆಗಮಿಸುವ ಭಕ್ತರ ಪ್ರಮಾಣಕ್ಕಿಂತಲೂ ಹೆಚ್ಚಾಗಿತ್ತು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದ ಸಮೀಪ ಗುಡ್ಡ ಕುಸಿಯುತ್ತಿದೆ ಮತ್ತು ಬಂಡೆ ಉರುಳುತ್ತಿದೆ ಎಂಬ ವರದಿಗಳಿಂದ ಭಯಭೀತರಾದ ಭಕ್ತಾದಿಗಳು ಒಂದೇ ಬಾರಿ ದೇವಾಲಯದಿಂದ ಹೊರಗೋಡಿದಾಗ ಈ ದುರಂತ ಸಂಭವಿಸಿತ್ತು.
ಶನಿವಾರ ಪ್ರಾರಂಭಗೊಂಡಿದ್ದ ಹತ್ತು ದಿನಗಳ ಶ್ರವಣ ಅಷ್ಠಮಿ ಆಚರಣೆಯ ಎರಡನೇ ದಿನ ಅತಿ ಮಳೆಯ ನಡುವೆಯೂ ದೇವಾಲಯದಲ್ಲಿ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿತ್ತು.
ಸಾವಿಗೀಡಾದವರಲ್ಲಿ ಹೆಚ್ಚಿನ ಮಂದಿ ಹಿಮಾಚಲ ಪ್ರದೇಶ ಮತ್ತು ನೆರೆಯ ಪಂಜಾಬ್ ರಾಜ್ಯಕ್ಕೆ ಸೇರಿದವರಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ದಾವಾರ್ ಚೌಕ ಆಸ್ಪತ್ರೆ ಮತ್ತು ಪಂಜಾಬ್ನ ಆನಂದಪುರದ ಸಾಹೀಬ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಇಂದೋರಿಯಾ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಹರಿಯಾಣ ರಾಜ್ಯಪಾಲ ಡಾ.ಎ.ಆರ್.ಕಿಡ್ವಾಯ್ ಮತ್ತು ಮುಖ್ಯಮಂತ್ರಿ ಬುಪಿಂದರ್ ಸಿಂಗ್ ಹೂಡಾ ನಯನಾದೇವಿ ದೇವಾಲಯದಲ್ಲಿನ ದುರಂತ ಘಟನೆಗೆ ಅತ್ಯಂತ ವಿಷಾಧ ವ್ಯಕ್ತಪಡಿಸಿದ್ದಾರೆ.
|