ಸೇತುಸಮುದ್ರಂ ವಿಷಯಕ್ಕೆ ಸಂಬಂಧಿಸಿ, ತಮಿಳುನಾಡು ಬಂದ್ ಆಚರಿಸಿದ ಬಗ್ಗೆ ನಿಂದನಾ ನೋಟಿಸ್ಗೆ ಪ್ರತಿಕ್ರಿಯಿಸದ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತು ಕೇಂದ್ರ ಸಾರಿಗೆ ಸಟಿವ ಟಿ.ಆರ್.ಬಾಲು ವಿರುದ್ಧ ಸುಪ್ರೀಂಕೋರ್ಟು, ಬಂಧನದ ವಾರಂಟ್ ಹೊರಡಿಸುವ ಎಚ್ಚರಿಕೆ ನೀಡಿದೆ.
ಆದರೆ, ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ಮತ್ತು ಜಿ.ಎಸ್.ಸಿಂಘ್ವಿ ಅವರನ್ನೊಳಗೊಂಡ ನ್ಯಾಯಪೀಠವು, ತಾನು ನೀಡಿದ ಶೋಕಾಸ್ ನೋಟಿಸಿಗೆ ಉತ್ತರ ನೀಡಲು ಕರುಣಾನಿಧಿ, ಬಾಲು, ರಾಜ್ಯ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಇತರ ಇಬ್ಬರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ನ್ಯಾಯಾಂಗ ನಿಂದನಾ ಅರ್ಜಿಯೊಂದಕ್ಕೆ ಸಂಬಂಧಿಸಿ ತಾನು ಹೊರಡಿಸಿದ್ದ ಶೋಕಾಸ್ ನೋಟಿಸಿಗೆ ಉತ್ತರಿಸಲು ತಮಿಳುನಾಡು ಮುಖ್ಯಮಂತ್ರಿ ಮತ್ತು ಇತರರು ವಿಫಲರಾಗಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಶೋಕಾಸ್ ನೋಟಿಸಿಗೆ ಉತ್ತರಿಸಲು ತಮಿಳುನಾಡು ಸರಕಾರ ಆಗಾಗ್ಗೆ ಸಮಯಾವಕಾಶ ಮತ್ತು ವಿಚಾರಣೆ ಮುಂದೂಡಿಕೆಗೆ ಕೋರುತ್ತಿದ್ದರೂ, ಕಳೆದ ಮಾರ್ಚ್ 31ರಂದು ಸರಕಾರ ನಾಲ್ಕು ವಾರ ಕಾಲಾವಕಾಶ ಕೋರಿದ್ದರೂ, ಉತ್ತರಿಸಲಿಲ್ಲ ಎಂದು ನ್ಯಾಯಾಲಯ ವಿಷಾದಿಸಿದೆ.
ನ್ಯಾಯಾಂಗ ನಿಂದನೆ ಕುರಿತಾದ ಶೋಕಾಸ್ ನೋಟೀಸಿಗೆ ಜೂನ್ 30ರಂದು ಉತ್ತರಿಸಲಾಗಿತ್ತು ಎಂದು ಎಐಎಡಿಎಂಕೆ ಮುಖ್ಯಸ್ಥೆ, ಪ್ರತಿಪಕ್ಷ ನಾಯಕಿ ಜೆ.ಜಯಲಲಿತಾ ದೂರಿದ್ದರು. ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ತಮಿಳುನಾಡು ಸರಕಾರವು ಕಳೆದ ವರ್ಷದ ಅಕ್ಟೋಬರ್ 1ರಂದು ರಾಜ್ಯ ಬಂದ್ಗೆ ಕರೆ ನೀಡಿತ್ತು. ಅದು, ರಾಜ್ಯ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡುವುದಾಗಿಯೂ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು.
|