ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಕ್ಷಣದಲ್ಲಿ ಸಮರ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದು ಸುರಕ್ಷಿತವಲ್ಲ ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.
ಭಾರತ ಮತ್ತು ಪಾಕ್ ನಡುವೆ ಯುದ್ಧದ ಸಾಧ್ಯತೆ ಇಲ್ಲ ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಳ್ಳಿಹಾಕಿರುವ ಬೆನ್ನಲ್ಲೇ, ಪಾಕ್ ಆಕ್ರಮಿತ ಗಡಿಭಾಗದಲ್ಲಿ ಪಾಕ್ ಸೇನೆಯನ್ನು ಜಮಾಗೊಳಿಸುವ ಮೂಲಕ ಯುದ್ಧ ತಯಾರಿಯನ್ನು ನಡೆಸುತ್ತಿದೆ. ಏತನ್ಮಧ್ಯೆ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಶನಿವಾರ ಸಂಜೆ ದಿಢೀರನೆ ಸೇನೆಯ ಮೂರು ಜನರಲ್ಗಳೊಂದಿಗೆ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲದೇ ಕಳೆದ 30ವರ್ಷಗಳ ಬಳಿಕ ಪ್ರಥಮ ಬಾರಿಗೆ ಭಾರತ ಪಾಕ್ ವಿರುದ್ಧ ಕಠಿಣ ನಿಲುವಿನ ಹೇಳಿಕೆ ನೀಡಿದ್ದು, ಪಾಕಿಸ್ತಾನಕ್ಕೆ ಭಾರತೀಯರು ಭೇಟಿ ನೀಡುವುದು ಸುರಕ್ಷಿತವಲ್ಲ ಎಂದು ಸಲಹೆ ನೀಡಿದೆ.
ಲಾಹೋರ್ ಬಾಂಬ್ ಸ್ಫೋಟದಲ್ಲಿ ಭಾರತದ ಪ್ರಜೆ ಸತೀಶ್ ಆನಂದ್ ಶಾಮೀಲಾಗಿರುವುದಾಗಿ ಪಾಕ್ ಆರೋಪಿಸಿರುವ ಹಿನ್ನೆಲೆಯಲ್ಲಿ ಭಾರತ ಕಟುವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಕಳೆದ ಎರಡು ದಿನಗಳಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಭಾರತೀಯರನ್ನು ಸೆರೆ ಹಿಡಿದಿರುವುದಾಗಿ ಪಾಕ್ ಮಾಧ್ಯಮಗಳ ವರದಿ ಬಹಿರಂಗಪಡಿಸಿದೆ.
ಆ ನಿಟ್ಟಿನಲ್ಲಿ ಭಾರತೀಯರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಾಗಲಿ ಅಥವಾ ಪಾಕಿಸ್ತಾನದಲ್ಲಿ ಇರುವುದಾಗಿ ಸುರಕ್ಷಿತವಲ್ಲ ಎಂದು ಭಾರತ ಎಚ್ಚರಿಕೆಯ ಸಂದೇಶ ನೀಡಿದೆ. |