ಮುಂಬೈಯಲ್ಲಿ ಉಗ್ರರು ನವೆಂಬರ್ 26ರಂದು ನಡೆಸಿರುವ ದಾಳಿಯ ಹಿಂದೆ ಗುಲ್ಬರ್ಗಾದಲ್ಲಿ 2006ರಲ್ಲಿ ಬಂಧನಕ್ಕೊಳಗಾದ ಲಷ್ಕರ್-ಇ-ತೋಯ್ಬಾ ತರಬೇತಿ ಪಡೆದಿರುವ ಸಮಿ ಆಹ್ಮದ್ ಅಲಿಯಾಸ್ ಅಬ್ದುಲ್ ಅಲಿಯಾಸ್ ಅಬ್ದುಲ್ ರೆಹ್ಮಾನ್ ಅಲಿಯಾಸ್ ಅಜ್ಮಲ್ ಖತಬ್ ಎಂಬಾತ ಸ್ಥಳೀಯರ ಸಂಪರ್ಕ ಒದಗಿಸಿರುವ ರೂವಾರಿ ಆಗಿರಬಹುದು ಎಂದು ಮೂಲಗಳು ಹೇಳಿವೆ.
ಹೈದರಾಬಾದ್ ಮೂಲದವನಾದ ಸಮಿ ಅಹಮ್ಮದ್, ಪಾಕಿಸ್ತಾನದಲ್ಲಿರುವ ಲಷ್ಕರೆ ಸಂಘಟನೆಯ ತರಬೇತಿ ಶಾಲೆಗಳಲ್ಲಿ ಕಠಿಣ ತರಬೇತಿ ಪಡೆದಿದ್ದಾನೆ ಮತ್ತು ಈತನಿಗೆ ಆಂಧ್ರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು ಎಂದು ಹೇಳಲಾಗಿದೆ.
ಈತ ಮುಂಬೈಯಲ್ಲಿ ಯುವಕರನ್ನು ಭಯೋತ್ಪಾದನಾ ತಂಡಕ್ಕೆ ನೇಮಕ ಮಾಡಿಕೊಳ್ಳಲು ಸಹಾಯ ಮಾಡಿದ್ದಾನೆ ಹಾಗೂ ಈತನ ಸಹಾಯದಿಂದ ನೇಮಕಗೊಂಡವರನ್ನು ಪಾಕಿಸ್ತಾನದಕ್ಕೆ ತರಬೇತಿಗಾಗಿ ಕಳುಹಿಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ. ಹೀಗೆ ನೇಮಕಗೊಂಡವರಲ್ಲಿ ಫಾಹಿಮ್ ಅನ್ಸಾರಿ ಸೇರಿದ್ದಾನೆ. ಮುಂಬೈದಾಳಿಯ ಕುರಿತು ಪೂರ್ವಮಾಹಿತಿ ಹೊಂದಿರುವ ಕುರಿತು ತನಿಖೆ ನಡೆಯುತ್ತಿದೆ.
ಅಹ್ಮದ್ ಸಹಾಯದಿಂದ ಮುಂಬೈ ದಾಳಿಗಾಗಿ ನೇಮಕಗೊಂಡ ಹೆಚ್ಚಿನವರು ಬಂಧನಕ್ಕೀಡಾಗಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಅನ್ಸಾರಿ ಸೇರಿದ್ದಾನೆ. ಆದರೆ ಇವರಲ್ಲಿ ಪ್ರಮುಖರಾಗಿರುವ ಜೋಗೇಶ್ವರಿಯ ನಿವಾಸಿ ತಾಜ್ ಅಹ್ಮದ್ ಶಾ ಮತ್ತು ಗೋರೆಗಾಂವ್ ನಿವಾಸಿ ಬಡಾ ರೆಹ್ಮಾನ್ ಎಂಬಿಬ್ಬರು ಇನ್ನೂ ತಲೆತಪ್ಪಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ತಾಜ್ ಅಹ್ಮದ್, ಬಡಾ ರೆಹ್ಮಾನ್ ಹಾಗೂ ಅನ್ಸಾರಿ ಅವರುಗಳನ್ನು ಮುಂಬೈದಾಳಿಗಾಗಿ ನಿಯೋಜಿಸಲಾಗಿತ್ತು. ಮುಂಬೈಯಲ್ಲಿ ಪ್ರಮುಖ ಗುರಿಗಳನ್ನು ಗುರುತಿಸಿರುವ ಬಳಿಕ ನೇಪಾಳದಲ್ಲಿ ಸಶ್ತ್ರಾಸ್ತ್ರಗಳನ್ನು ಪಡೆಯಲು ಯತ್ನಿಸುತ್ತಿರುವ ವೇಳೆಗೆ ಫೆಬ್ರವರಿಯಲ್ಲಿ ಅನ್ಸಾರಿ ಬಂಧನಕ್ಕೀಡಾಗಿದ್ದಾನೆ.
ಮುಂಬೈದಾಳಿಗೆ ಬೇಕಷ್ಟು ಸಶ್ತಾಸ್ತ್ರ ಮತ್ತು ಜರನನ್ನು ಒದಗಿಸಲು ಲಷ್ಕರೆಯ ನೇಪಾಳ ಪ್ರದೇಶದ ಕಮಾಂಡರ್ ಆಗಿರುವ ಸಬಾವುದ್ದೀನ್, ಅನ್ಸಾರಿಗೆ ಒದಗಿಸಬೇಕು ಎಂಬ ಕೆಲಸ ಒಪ್ಪಿಸಲಾಗಿತ್ತು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೇಲೆ ದಾಳಿ ನಡೆಸಿರುವ ಸಬಾವುದ್ದೀನ್ ಉತ್ತರ ಪ್ರದೇಶದ ಸಿಆರ್ಪಿಎಫ್ ಶಿಬಿರದ ಮೇಲೆ ನಡೆಸಿರುವ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದಾನೆ.
ಸಬಾವುದ್ದೀನ್, ಅನ್ಸಾರಿ ಮತ್ತು ಮೊಹಮ್ಮದ್ ಇಮ್ರಾನ್ ಶೇಕ್ ಮುಂತಾದವರು ಕಳೆದ 11 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಪ್ಪಿಸಿಕೊಂಡಿರುವ ವ್ಯಕ್ತಿಗಳು ಮುಂಬೈ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅಧಿಕಾರಿಗಳು ಊಹಿಸಿದ್ದಾರೆ.
ಇಮ್ರಾನ್ ಶೇಕ್ ಅಲಿಯಾಸ್ ಚೋಟಾ ಇಮ್ರಾನ್ ಪತ್ತೆಗೆ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಯೋಜಿಸುತ್ತಿದೆ. ಸಬಾವುದ್ದೀನ್ ಮತ್ತು ಅನ್ಸಾರಿಗಳು ಈಗಾಗಲೇ ಬಂಧನದಲ್ಲಿದ್ದಾರೆ. ಇಮ್ರಾನ್ ಮುಂಬೈಯ ಗೋರೆಗಾಂವ್ನ ಲಕ್ಷ್ಮೀ ನಗರದ ನಿವಾಸಿ.
ಅನ್ಸಾರಿಯ ಜಿಹಾದಿ ತಿಳುವಳಿಕೆಯನ್ನು ಕಂಡುಕೊಂಡ ಇಮ್ರಾನ್ ಈತನನ್ನು ಸಮಿ ಅಹ್ಮದ್ಗೆ ಪರಿಚಯಿಸಿದ್ದ. ಇಮ್ರಾನ್ನ ಸ್ಥಳೀಯ ಸಂಪರ್ಕಗಳು ಮತ್ತು ಆತನ ನೇಮಕ ಪ್ರಕ್ರಿಯೆಗಳ ಕುರಿತು ತನಿಖೆಯಾಗಬೇಕಾದ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.
|