ಮತ್ತದೆ ಹಳೇ ರಾಗ ಹಾಡಿರುವ ಪಾಕಿಸ್ತಾನ, ಭಾರತ ನೀಡಿರುವ ಪುರಾವೆ ಏನೇನೂ ಸಾಲದು ಮತ್ತು ಇದರನ್ವಯ ಯಾವುದೇ ಕ್ರಮಕೈಗೊಳ್ಳಲಾಗದು ಎಂದು ಹೇಳಿದೆ.
"ಮುಂಬೈ ದಾಳಿ ಕುರಿತು ಪಾಕಿಸ್ತಾನಕ್ಕೆ ಒದಗಿಸಲಾಗಿರುವ ಪುರಾವೆಗಳು ಏನೇನೂ ಸಾಲದು ಮತ್ತು ಇದರ ಆಧಾರದಲ್ಲಿ ಯಾವದೇ ಕ್ರಮಕೈಗೊಳ್ಳಲಾಗದು ಮಾತ್ರವಲ್ಲದೆ, ಕಸಬ್ಗೆ ಹಿಂಸೆ ನೀಡಿರುವ ಹಿನ್ನೆಲೆಯಲ್ಲಿ ಆತ ಈ ಹೇಳಿಕೆ ನೀಡಿದ್ದಾನೆ. ತನಿಖಾ ತಂಡಗಳ ಒತ್ತಡದ ಹೇಳಿಕೆಗಳಿಗೆ ಯಾವುದೇ ಕಾನೂನಿ ಆಧಾರಗಳಿಲ್ಲ" ಎಂದು ಪಾಕಿಸ್ತಾನವು ದಕ್ಷಿಣ ಮತ್ತು ಕೇಂದ್ರೀಯ ಏಶ್ಯಾ ವ್ಯವಹಾರಗಳ ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ರಿಚರ್ಡ್ ಬುಚರ್ ಅವರಿಗೆ ಸ್ಪಷ್ಟಪಡಿಸಿದೆ ಎಂಬುದಾಗಿ ಪಾಕಿಸ್ತಾನಿ ದೈನಿಕ 'ದಿ ನೇಶನ್' ವರದಿಮಾಡಿದೆ.
ಪಾಕಿಸ್ತಾನವು ಒಂದೆರಡು ದಿನಗಳೊಳಗಾಗಿ ಭಾರತಕ್ಕೆ ಅಧಿಕೃತ ಉತ್ತರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಮಧ್ಯೆ ಭಾರತವು ಉಗ್ರಗಾಮಿ ಕೃತ್ಯದಲ್ಲಿ ಪಾಲ್ಗೊಂಡಿರುವ ಕುರಿತು ಪ್ರತ್ಯೇಕ ಮಾಹಿತಿಯನ್ನು ಸಿದ್ಧಪಡಿಸುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಮುಂಬೈ ದಾಳಿಯ ಕುರಿತು ತನಿಖೆಯಿಂದ ಕಲೆಹಾಕಲಾಗಿರುವ ಮಾಹಿತಿಯಾಧಾರದ ದಾಖಲೆಯನ್ನು ಭಾರತ ಸೋಮವಾರ ಪಾಕಿಸ್ತಾನ ಹಾಗೂ ಇತರ ರಾಷ್ಟ್ರಗಳಿಗೆ ಹಸ್ತಾಂತರಿಸಿತ್ತು. ಇದರಲ್ಲಿ ಮುಂಬೈ ದಾಳಿಕೋರರು ಮತ್ತು ಪಾಕಿಸ್ತಾನದಲ್ಲಿರುವ ಲಷ್ಕರೆ ಮುಖಂಡರ ನಡುವಿನ ದೂರವಾಣಿ ಮಾತುಕತೆಗಳ ಸಂದೇಶವೂ ಸೇರಿದೆ.
ಕಸಬ್ ಬಳಿಯಿಂದ ವಶಪಡಿಸಿಕೊಳ್ಳಲಾಗಿರುವ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳು ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟ ವಸ್ತುಗಳಾಗಿವೆ ಎಂದೂ ಭಾರತ ಹೇಳಿದೆ.
ಭಾರತವು ಈ ದಾಖಲೆಗಳನ್ನು ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಸಂಸ್ಥೆಯ ಮತ್ತು ಜಿ-8 ರಾಷ್ಟ್ರಗಳ ಸದಸ್ಯರಿಗೆ ನೀಡಲಿದ್ದು ಈ ಮೂಲಕ ದಾಳಿಯಲ್ಲಿ ತನ್ನ ಪ್ರಜೆಗಳ ಕೈವಾಡ ಇರುವುದನ್ನು ಪಾಕಿಸ್ತಾನ ಒಪ್ಪಿಕೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಡ ಹೇರಲಿದೆ.
ಪಾಕಿಸ್ತಾನದ ಹೈಕಮಿಷನರ್ ಶಾಹಿದ್ ಮಲಿಕ್ ಅವರಿಗೆ ದೆಹಲಿಯಲ್ಲಿ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರಿಗೆ ಇಸ್ಲಾಮಾಬಾದ್ನಲ್ಲಿ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ ಎಂದು ವರದಿಗಾರರಿಗೆ ತಿಳಿಸಿರುವ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಭಾರತವು ಪುರಾವೆಗಳನ್ನು ನೀಡಲಿಲ್ಲ ಎಂಬ ಪಾಕ್ ಆರೋಪವನ್ನು ಅಲ್ಲಗಳೆದಿದ್ದಾರೆ. |