ಹಂದಿಜ್ವರದಿಂದ ಬಳಲುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಗುಜರಾತ್ನಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧಾರ್ಮಿಕ ಗುರುಗಳೂ ಸೇರಿದಂತೆ ಹಲವಾರು ಮಂದಿ ಕೇಂದ್ರೀಯ ಗುಜರಾತಿನ ವಿವಿಧ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಖ್ಯಮಂತ್ರಿಗಳಿಗೆ ಹಂದಿಜ್ವರ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಸಮುದಾಯದ ಮಂದಿ ದರ್ಗಾಗಳಲ್ಲಿ ಸೇರಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು ಎಂಬುದಾಗಿ ಗುಜರಾತ್ ಅಲ್ಪಸಂಖ್ಯಾತ ಮಂಡಳಿಯ ಅಬ್ದುಲ್ ಗನಿ ಖುರೇಶಿ ತಿಳಿಸಿದ್ದಾರೆ.
ಬರೋಡಾದ ಎಂ.ಎಸ್. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ತ್ವರಿತ ಗುಣಮುಖರಾಗುವಂತೆ ಹಾರೈಸಿದರು.
ಕೇಂದ್ರೀಯ ಗುಜರಾತಿನ ಹಲವೆಡೆಗಳಲ್ಲಿ ಮೃತ್ಯುಂಜಯ ಜಪ ಹಾಗೂ ಯಜ್ಞಗಳನ್ನು ಮಾಡಿರುವ ಕುರಿತು ವರದಿಯಾಗಿದೆ.