ಬರೊಯಿಪುರ(ಪ. ಬಂಗಾಳ), ಮಂಗಳವಾರ, 3 ನವೆಂಬರ್ 2009( 09:52 IST )
ವ್ಯಾಪಾಯಿಯೊಬ್ಬರ ಹಣದ ಚೀಲವನ್ನು ಲಪಟಾಯಿಸಲು ಯತ್ನಿಸಿದ ಐವರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಮೂರುಮಂದಿ ಮೃತಪಟ್ಟಿದ್ದು ಇನ್ನೋರ್ವ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸಂಭವಿಸಿದೆ.
ವಾಹನದಲ್ಲಿ ತೆರಳುತ್ತಿದ್ದ ವ್ಯಾಪಾರಿಯೊಬ್ಬರ ಹಣದ ಚೀಲವನ್ನು ಕಸಿದುಕೊಳ್ಳಲು ಐವರ ಗುಂಪೊಂದು ಯತ್ನಿಸಿದಾಗ ಈಘಟನೆ ನಡೆದಿದೆ. ಕಳ್ಳರಲ್ಲಿ ಮೂವರು ಸತ್ತಿದ್ದು, ಮತ್ತೊಬ್ಬ ಗಾಯಗೊಂಡಿದ್ದರೆ, ಇನ್ನೋರ್ವ ಪರಾರಿಯಾಗಿದ್ದಾನೆ.
ಕಳ್ಳರ ಕೃತ್ಯವನ್ನು ಕಂಡ ಸ್ಥಳದಲ್ಲಿದ್ದ ಸಾರ್ವಜನಿಕರು ಇದನ್ನು ಕಂಡು ರೊಚ್ಚಿಗೆದ್ದು ಐವರಲ್ಲಿ ಮೂವರನ್ನು ಹಿಡಿದು ಮನಸೋಇಚ್ಛೆ ಥಳಿಸಿದರು. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ. ಉಳಿದವರಲ್ಲಿ ಒಬ್ಬ ತಪ್ಪಿಸಿಕೊಂಡು ಓಡಿ ಹೋಗಿದ್ದರೆ ಮತ್ತೊಬ್ಬ ಗಾಯಾಳು ಚಿಕಿತ್ಸೆ ಪಡೆಯತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.