ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರರಿಬ್ಬರನ್ನು ಕರಡಿಯೊಂದು ದಕ್ಷಿಣ ಕಾಶ್ಮೀರದ ದಟ್ಟಾರಣ್ಯದಲ್ಲಿ ತಿಂದು ಹಾಕಿರುವ ಘಟನೆ ಸೋಮವಾರ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಪ್ರತ್ಯೇಕತಾವಾದಿ ಉಗ್ರರ ಅಡಗು ತಾಣಕ್ಕೆ ಪ್ರವೇಶಿಸಿದ್ದ ಕರಡಿಯು ಉಗ್ರರಿಬ್ಬರನ್ನು ಕೊಂದು ಹಾಕಿದೆ ಎಂಬುದಾಗಿ ಸೇನಾವಕ್ತಾರರೊಬ್ಬರು ಹೇಳಿದ್ದಾರೆ. ಇದರಿಂದಾಗಿ ಕಾಶ್ಮೀರದಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗೆ ಕರಡಿಯೂ ಸಾಥ್ ನೀಡಿದಂತಾಗಿದೆ!
ಕರಡಿದಾಳಿಯಿಂದ ಮೃತರಾದವರನ್ನು ಹಿಜ್ಬುಲ್ ಉಗ್ರರಾದ ಸೈಫುಲ್ಲಾ ಮತ್ತು ಕೈಸರ್ ಎಂಬುದಾಗಿ ಗುರುತಿಸಲಾಗಿದೆ. ಸೈಫುಲ್ಲಾ ಪಿರ್ ಪಂಚಾಲ್ ಪ್ರದೇಶದ ಜಿಲ್ಲಾ ಕಮಾಂಡರ್ ಆಗಿದ್ದರೆ, ಕೈಸರ್ ತೆಹ್ಸಿಲ್ ಕಮಾಂಡರ್ ಆಗಿದ್ದ ಎಂದು ಅವರು ಹೇಳಿದ್ದಾರೆ.
ಉಗ್ರರ ಅಡಗುತಾಣದಲ್ಲಿ ಎರಡು ಎಕೆ-47 ರೈಫಲ್ಗಳು, ನಾಲ್ಕು ಮ್ಯಾಗಜೀನ್ಗಳು ಮತ್ತು ಉಗ್ರರು ಬಳಸುತ್ತಿರುವ ಇತರ ಸಾಮಾಗ್ರಿಗಳು ಸಿಕ್ಕಿವೆ ಎಂದು ವಕ್ತಾರರು ತಿಳಿಸಿದರು.
ಕಾಶ್ಮೀರದಲ್ಲಿ ಸುಮಾರು 20 ವರ್ಷಗಳಿಂದ ಪ್ರತ್ಯೇಕತಾವಾದಿ ಉಗ್ರರು ಹಿಂಸಾಚಾರ ನಡೆಸುತ್ತಿದ್ದು, ವನ್ಯಪ್ರಾಣಿಯೊಂದು ಉಗ್ರರನ್ನು ಕೊಂದು ಹಾಕಿರುವ ಘಟನೆ ಇದೇ ಪ್ರಥಮವಾಗಿ ಸಂಭವಿಸಿದೆ. ಉಗ್ರರು ಕಾಶ್ಮೀರದ ದಟ್ಟಾರಣ್ಯಗಳನ್ನು ತಮ್ಮ ಅಡಗುತಾಣ ನಿರ್ಮಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.