ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಗಾಂಧಿದಾಮ್-ಬೆಂಗಳೂರು ಎಕ್ಸ್ಪ್ರೆಸ್ ರೈಲಿನ 11 ಬೋಗಿಗಳು ಡೊಂಬಿವಿಲಿ ಬಳಿ ಬುಧವಾರ ಮುಂಜಾನೆ ಹಳಿತಪ್ಪಿದ್ದು, ಕನಿಷ್ಠ 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೆಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ರೈಲ್ವೆ ಮತ್ತು ಕೇಂದ್ರ ರೈಲ್ವೆ ಸಂಪರ್ಕಿಸುವ ವಾಸೈ-ದಿವಾ ವಿಭಾಗದ ದೊಂಬಿವಿಲಿಯಲ್ಲಿ ಈ ಘಟನೆ ಸಂಭವಿಸಿದ್ದಾಗಿ ರೈಲ್ವೆ ನಿಯಂತ್ರಣ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ. ಹಳಿತಪ್ಪಿದ 11 ಬೋಗಿಗಳಲ್ಲಿ ನಾಲ್ಕು ತಲೆಕೆಳಗಾಗಿ ಮಗುಚಿಕೊಂಡಿದ್ದು, ತೀವ್ರವಾಗಿ ಹಾನಿಗೊಂಡಿವೆ.
ಪರಿಹಾರ ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ರೈಲು ಸಂಚಾರ ಮರುಸ್ಥಿತಿಗೆ ತರಲು ಕೆಲಸ ನಡೆಯುತ್ತಿದೆ. ಕೇಂದ್ರ ರೈಲ್ವೆಯು ರೈಲಿನಲ್ಲಿದ್ದ ಪ್ರಯಾಣಿಕರನ್ನು ವಿಶೇಷ ರೈಲಿನಲ್ಲಿ ಅವರವರ ಸ್ಥಳಗಳಿಗೆ ಸಾಗಿಸಲು ವ್ಯವಸ್ಥೆ ಮಾಡಿದೆ.
ತಮ್ಮ ಬಂಧುಬಾಂಧವರ ಬಗ್ಗೆ ಮಾಹಿತಿ ಒದಗಿಸಲು ಮುಂಬೈ, ಥಾನೆ, ಕಲ್ಯಾಣ್, ವಾಸೈ, ಗಾಂಧಿಧಾಮ್, ಅಹ್ಮದಾಬಾದ್, ವಡೋದ್ರಾ ಮತ್ತು ಬೆಂಗಳೂರಿನಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ರೈಲ್ವೆ ಸ್ಥಾಪನೆ ಮಾಡಿದೆ.