ನನ್ನೆದುರು ವಂದೇ ಮಾತರಂ ವಿರುದ್ಧ ಫತ್ವಾ ಕೈಗೊಂಡಿಲ್ಲ:ಚಿದು
ನವದೆಹಲಿ, ಬುಧವಾರ, 4 ನವೆಂಬರ್ 2009( 15:50 IST )
PTI
ಜಮೀಯತ್ ಉಲೇಮಾ ಎ ಹಿಂದ್ನ 30ನೇ ಸಮಾವೇಶದಲ್ಲಿ ವಂದೇ ಮಾತರಂ ಹಾಡದಂತೆ ಮುಸ್ಲಿಮರಿಗೆ ಸೂಚನೆ ನೀಡುವ ನಿರ್ಣಯವನ್ನು(ಫತ್ವಾ)ತನ್ನ ಎದುರು ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಚಿದಂಬರಂ ಅವರು ನವೆಂಬರ್ 3ರಂದು ಜೆಯುಎಚ್ನ ದಿಯೋಬಂದ್ ಸಮಾವೇಶದಲ್ಲಿ ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ಇದ್ದರು. ಈ ಸಮಯದಲ್ಲಿ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ. ಅಲ್ಲಿ ಭಾಷಣ ಮಾಡುವಾಗ ಅವರಿಗೆ ವಂದೇ ಮಾತರಂ ಅಥವಾ ಮಹಿಳಾ ಮೀಸಲಾತಿ, ಟೆಲಿವಿಷನ್ ಕುರಿತ ಯಾವುದೇ ನಿರ್ಣಯದ ಬಗ್ಗೆ ಅರಿವಿಗೆ ಬಂದಿಲ್ಲ ಎಂದು ಸಚಿವರ ಸಹಾಯಕರು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಅಲ್ಲದೆ, ಗೃಹ ಸಚಿವರು ಸಿದ್ದ ಪಡಿಸಲಾಗಿದ್ದ ಲಿಖಿತ ಭಾಷಣವನ್ನು ಓದಿದ್ದರು. ಅಲ್ಲಿ ಲಿಖಿತ ಭಾಷಣದ ಹೊರತಾಗಿ ಬೇರೆ ವಿಚಾರ ಮಾತನಾಡುವ ಸಂದರ್ಭ ಇರಲಿಲ್ಲ ಎಂದೂ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನೀಡಲಾದ ಸಚಿವರ ಹೇಳಿಕೆ ಸ್ಪಷ್ಟಪಡಿಸಿದೆ.