ಭಾರತದ ಮೇಲೆ ಮತ್ತೊಂದು ಮುಂಬೈ ಮಾದರಿ ದಾಳಿ ನಡೆದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಭಾರತಕ್ಕಿಲ್ಲ ಎಂಬ ಆತಂಕಕಾರಿ ಹೇಳಿಕೆಯನ್ನು ಸ್ವತಃ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ನೀಡಿದ್ದಾರೆ.
ಭಾರತವು ತನ್ನ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗುವ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಮತ್ತೆ ಮತ್ತೆ ಸುಲಭ ದಾರಿಗಳನ್ನು ಮಾಡಿಕೊಡುತ್ತಿದೆ ಎಂದು ಹೇಳಿದರು.
ಅಮೆರಿಕ ತನ್ನ ನೆಲದಲ್ಲಿ ಮತ್ತೊಂದು 9/11ಘಟನೆ ಮರುಕಳಿಸದಂತೆ ನೋಡಿಕೊಂಡಿದೆ. ಇಂಡೋನೇಷಿಯಾ ಕೂಡ ಭಾಲಿಯಲ್ಲಿ ನಡೆದ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿದೆ. ಆದರೆ, ಭಾರತ ಮಾತ್ರ 2001ರಲ್ಲಿ ಸಂಸತ್ ಮೇಲೆ ಭಯೋತ್ಪಾದಕ ದಾಳಿ, ದೆಹಲಿ ಸ್ಫೋಟ, ಮುಂಬೈ ದಾಳಿಯಂಥ ಘಟನೆಗಳು ನಡೆದ ಮೇಲೂ ಅಂಥ ದಾಳಿಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕಪೂರ್ ಅಭಿಪ್ರಾಯಪಟ್ಟಿದ್ದಾರೆ.
ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ಆಯೋಜಿಸಿದ್ದ, ನೆಟ್ ವರ್ಕ್ ಸೆಂಟ್ರಿಸಿಟಿ ಆಂಡ್ ನ್ಯಾಷನಲ್ ಸೆಕ್ಯೂರಿಟಿ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ವಿಷಯವನ್ನು ಪ್ರಸ್ತಾಪಿಸುತ್ತಾ, ಭಾರತ ಮತ್ತೊಂದು ಮುಂಬೈ ದಾಳಿಯನ್ನು ತಡೆಯಲು ಶಕ್ತವಾಗಿಲ್ಲ ಎಂದರು.