ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಅವರು ರಾಜಧಾನಿ ದೆಹಲಿಯಿಂದ ಹೊರಗಿನವರಾಗಿರುತ್ತಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಬಹಿರಂಗಪಡಿಸಿದ್ದಾರೆ. ಪ್ರಸಕ್ತ ಅಧ್ಯಕ್ಷರಾಗಿರುವ ರಾಜನಾಥ್ ಸಿಂಗ್ ಅವರ ಅವಧಿ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುತ್ತದೆ. ಈ ಮಧ್ಯೆ ಬಿಜೆಪಿ ನಾಯಕತ್ವಕ್ಕೆ ವಿವಿಧ ಹೆಸರುಗಳು ಕೇಳಿಬರುತ್ತಿವೆ.
ಆದರೆ, ಹೊಸ ಅಧ್ಯಕ್ಷರ ಪಟ್ಟಿಯಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಹಾಗೂ ಅನಂತ್ ಕುಮಾರ್ ಅವರ ಹೆಸರುಗಳಿಲ್ಲ ಎಂದು ಹೇಳಿರುವ ಭಾಗ್ವತ್, ಈ ಭಾರಿಯ ಅಧ್ಯಕ್ಷರು ದೆಹಲಿಯಿಂದ ಹೊರಗಿನವರಾಗಿರುತ್ತಾರೆ ಎಂದು ‘ಇಂಡಿಯಾ ಟುಡೆ’ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ದೆಹಲಿಯ ಹೊರಗಿನವರು ಯಾರಾದರೂ 50-55 ವಯೋಮಾನದವರು ಅಧ್ಯಕ್ಷರಾಗುವರೇ ಎಂಬ ಭಾಗ್ವತ್ ಉತ್ತರ ಹೌದು ಎಂಬುದಾಗಿತ್ತು.
ಮೂರು ವಿಧಾನ ಸಭೆ ಚುನಾವಣೆಗಳಲ್ಲಿ ಕಳಪೆ ಸಾಧನೆ ಮಾಡಿದ ಬಳಿಕ ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ನಾಜೂಕಿನ ಉತ್ತರ ನೀಡಿದ ಅವರು "ಬದಲಾವಣೆ ನಡೆಯಲಿದೆ. ಈ ಸಂಬಂಧ ಬಿಜೆಪಿ ಏನು ಹೇಳಿದೆಯೋ ಕೇವಲ ಅದನ್ನು ಮಾತ್ರ ನಾನು ಹೇಳಿದ್ದೇನೆ ಮತ್ತು ನೂತನ ಅಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಪೂರ್ವಸಿದ್ಧತೆ ನಡೆಸುತ್ತಿದೆ" ಎಂದು ಅವರು ವಿವರಿಸಿದರು.
ಬಿಜೆಪಿಯಲ್ಲಿ ಸಂಘಪರಿವಾರವು ಮಧ್ಯಪ್ರವೇಶಿಸುತ್ತಿದೆ ಹಾಗೂ ಅದರ ಮೇಲೆ ತನ್ನ ಸಿದ್ಧಾಂತವನ್ನು ಹೇರುತ್ತಿದೆ ಎಂಬ ವಿವಾದದ ಕುರಿತಂತೆ ಕೇಳಿದ ಪ್ರಶ್ನೆಗೆ, "ಆರ್ಎಸ್ಎಸ್ ಎಂದೂ ಬಿಜೆಪಿ ವಿಚಾರದಲ್ಲಿ ಮೂಗುತೂರಿಸುವುದಿಲ್ಲ. ಪಕ್ಷ ಕೇಳಿದಾದ ಸಲಹೆಯನ್ನು ಮಾತ್ರ ನೀಡುತ್ತದೆ" ಎಂದು ಸ್ಪಷ್ಟಪಡಿಸಿದರು.