ತಮಿಳ್ನಾಡಿನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬಿಸಿಲಿನ ಧಗೆಗೆ ಬೆಂಡಾಗಿದ್ದ ಇಳೆಯೀಗ ತಂಪಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಅಲ್ಲಲ್ಲಿ ಹಾನಿಯುಂಟುಮಾಡಿದ್ದು, ಮನೆ ಕುಸಿತ, ಗೋಡೆ ಕುಸಿತ ಮುಂತಾದ ಘಟನೆಗಳಿಂದ ರಾಜ್ಯಾದ್ಯಂತ ಸುಮಾರು 13ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿನ ರೆಡ್ಡಿ ಹಿಲ್ಸ್ನಲ್ಲಿ 15 ಸೆ.ಮಿ ಮಳೆಯಾಗಿದ್ದರೆ, ಕಡಲೂರಿನಲ್ಲಿ 11 ಸೆ.ಮಿ ಮಳೆಯಾಗಿದೆ ಎಂದು ಹವಾಮಾನ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ನಾಳೆಯೂ ಮಳೆ ಮುಂದುವರಿಯಲಿದೆ ಎಂಬದಾಗಿ ಅವರು ಸೂಚನೆ ನೀಡಿದ್ದಾರೆ.
ಚೆನ್ನೈ ನಗರದ ಬಹುತೇಕ ತಗ್ಗು ಪ್ರದೇಶಗಳು ನೀರಿನಿಂದಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕೆಲವು ಶಾಲೆಗಳಿಗೆ ರಜೆ ಸಾರಲಾಗಿದ್ದರೆ, ಕಚೇರಿ ಮತ್ತಿತರ ಅಗತ್ಯ ಕೆಲಸಗಳಿಗೆ ತೆರಳುವವರು ಈ ಬಿಸಿಲನಾಡಿನಲ್ಲಿ ಮಳೆಯಿಂದಾಗಿ ಪರದಾಡುವಂತಾಗಿದೆ.