ಭಾರತದ ಪೂರ್ವಭಾಗದ ಅತಿದೊಡ್ಡ ಮಕ್ಕಳಾಸ್ಪತ್ರೆ ಎಂದೇ ಖ್ಯಾತವಾಗಿರುವ ಬಿ.ಸಿ.ರಾಯ್ ಆಸ್ಪತ್ರೆಯಲ್ಲಿ ಕಳೆದ ಮೂವತ್ತಾರು ಗಂಟೆಗಳಲ್ಲಿ 17 ಕಂದಮ್ಮಗಳು ಸಾವನ್ನಪ್ಪಿದ್ದು ಪೋಷಕರ ರೋದನ ಮುಗಿಲು ಮುಟ್ಟಿದೆ. ಘಟನೆಯಿಂದ ಆಘಾತಗೊಂಡಿರುವ ಪಶ್ಚಿಮ ಬಂಗಾಳ ಸರಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.
ಮಕ್ಕಳು ಮೃತಪಟ್ಟಿದ್ದರಿಂದ ಕುಪಿತರಾದ ಮಕ್ಕಳ ಸಂಬಂಧಿಕರು ಹಾಗೂ 300ಕ್ಕೂ ಹೆಚ್ಚು ಪ್ರತಿಭಟನಾಕಾರರು ಈ ಸರಕಾರಿ ಆಸ್ಪತ್ರೆಯ ಎದುರು ಜಮಾಯಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಮೂರು ಮಕ್ಕಳು ಕಳೆದ ರಾತ್ರಿಯೇ ಮೃತಪಟ್ಟಿದ್ದಾರೆ, ಇಬ್ಬರು ಮಕ್ಕಳು ಇಂದು ಬೆಳಿಗ್ಗೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಸಾವಿಗೆ ಕಾರಣ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ಆಸ್ಪತ್ರೆಗೆ ಕರೆತರುವಾಗಲೇ ಮಕ್ಕಳ ಪರಿಸ್ಥಿತಿ ವಿಷಮಿಸಿತ್ತು, ಈ ಮಕ್ಕಳು ಯಾವುದೇ ಕಾಯಿಲೆಯಿಂದ ಸತ್ತಿಲ್ಲ ಎಂದು ಹೇಳಿದ್ದಾರೆ.
'ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದೇನೆ ಹಾಗೂ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.