ಚಿದಂಬರಂ ನಂಬಿಕಸ್ತ ಸಚಿವ, ರಾಜೀನಾಮೆ ಅಗತ್ಯವಿಲ್ಲ: ಪ್ರಧಾನಿ
ನ್ಯೂಯಾರ್ಕ್, ಭಾನುವಾರ, 25 ಸೆಪ್ಟೆಂಬರ್ 2011( 12:19 IST )
PTI
2ಜಿ ತರಂಗ ಗುಚ್ಚ ಹಗರಣಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ .ಪಿ.ಚಿದಂಬರಂ ರಾಜೀನಾಮೆ ನೀಡಬೇಕು ಎನ್ನುವ ಪ್ರತಿಪಕ್ಷಗಳ ಒತ್ತಾಯವನ್ನು ಪ್ರಧಾನಿ ಮನಮೋಹನ್ ಸಿಂಗ್ ತಿರಸ್ಕರಿಸಿ, ಅವರೊಬ್ಬ ನಂಬಿಕಸ್ತ ಸಚಿವ ಎಂದು ಹೇಳಿದ್ದಾರೆ.
2ಜಿ ಹಗರಣದಲ್ಲಿ ಸಚಿವ ಚಿದಂಬರಂ ಅವರ ಯಾವುದೇ ಪಾತ್ರವಿಲ್ಲ. ಅವರ ಬದ್ಧತೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಚಿದು ತುಂಬಾ ಪ್ರಾಮಾಣಿಕ ವ್ಯಕ್ತಿ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜೀನಾಮೆ ಕೇಳುವುದು ವಿಪಕ್ಷಗಳ ಹಕ್ಕಾಗಿದೆ. ಆದರೆ, ತಮ್ಮ ಸಂಪುಟದ ಸಚಿವರನ್ನು ಯಾವುದೇ ಸನ್ನಿವೇಶದಲ್ಲಿ ಸಮರ್ಥಿಸಿಕೊಳ್ಳಲು ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
2ಜಿ ತರಂಗ ಗುಚ್ಚ ಹಂಚಿಕೆ ಹಗರಣದಲ್ಲಿ ಪಿ.ಚಿದಂಬರಂ ಪಾತ್ರ ಕುರಿತ ಟಿಪ್ಪಣಿಯಿಂದ ಭುಗಿಲೆದ್ದಿರುವ ವಿವಾದ ಬಗ್ಗೆ ಚರ್ಚಿಸಲು ವಿತ್ತಸಚಿವ ಪ್ರಣಬ್ ಮುಖರ್ಜಿ, ಪ್ರಧಾನಿಯವರನ್ನು ಇಂದು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.