ಮಾವೋವಾದಿಗಳು ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ: ಮಮತಾ ಬ್ಯಾನರ್ಜಿ
ಕೋಲ್ಕತಾ, ಸೋಮವಾರ, 26 ಸೆಪ್ಟೆಂಬರ್ 2011( 17:56 IST )
PTI
ತೃಣಮೂಲ ಕಾಂಗ್ರೆಸ್ನ ಇತರ ನಾಯಕರು ಸೇರಿದಂತೆ ಪಕ್ಷದ ಹಿರಿಯ ಮುಖಂಡ ಕೇಂದ್ರ ಸಚಿವ ಮುಕುಲ್ ರಾಯ್ ಮತ್ತು ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನನ್ನ ನಿವಾಸದ ಸುತ್ತಲು ಕೆಲ ಮಾವೋವಾದಿಗಳು ಕಾಣಿಸಿಕೊಂಡಿದ್ದಾರೆ. ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ. ಪಕ್ಷದ ಮುಖಂಡರಾದ ಮುಕುಲ್ ರಾಯ್, ಶ್ರೀಕಾಂತಾ ಮಹತೋ ಅವರನ್ನು ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ಜಂಗಲ್ಮಹಲ್ನಲ್ಲಿ ಸಭೆಯೊಂದನ್ನು ನಡೆಸಿದ ಮಾವೋವಾದಿ ನಾಯಕ, ತೃಣಮೂಲ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ನಮ್ಮ ಗುರಿಯಾಗಿದ್ದಾರೆ ಎಂದು ಹೇಳಿರುವುದು ವರದಿಯಾಗಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ರಾಜ್ಯದಲ್ಲಿ ಮಾವೋವಾದಿಗಳಿಲ್ಲ ಎಂದು ಹೇಳಿಕೆ ನೀಡಿದ್ದರು. ಪ್ರಸಕ್ತ ವರ್ಷಧ ಆರಂಭದಲ್ಲಿ ಅದಿಕಾರಕ್ಕೆ ಬಂದ ನಂತರ ಮಾವೋವಾದಿಗಳ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲಾಗುವುದು ಎಂದು ಮಮತಾ ಹೇಳಿಕೆ ನೀಡಿದ್ದರು.
ಏತನ್ಮಧ್ಯೆ, ಕಳೆದ ಅಗಸ್ಟ್ ತಿಂಗಳಿನಿಂದ ಮಾವೋವಾದಿಗಳು ನಿರಂತರವಾಗಿ ಸರಣಿ ಹತ್ಯೆಗಳಲ್ಲಿ ಭಾಗಿಯಾಗುತ್ತಿರುವುದರಿಂದ ಬೇಸತ್ತ ಮಮತಾ, ಮಾವೋವಾದಿಗಳೊಂದಿಗೆ ಸಂಧಾನ ಸಾಧ್ಯವಿಲ್ಲ ಎನ್ನುವುದು ಇದೀಗ ಅರಿವಾಗಿದೆ. ಮಾವೋವಾದಿಗಳ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಮಾವೋವಾದಿಗಳು ಸರಣಿ ಹತ್ಯಾಕೃತ್ಯಗಳನ್ನು ನಡೆಸುತ್ತಿದ್ದಾರೆ. ಒಂದು ಕಡೆಯ ಪ್ರಯತ್ನದಿಂದ ಶಾಂತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸರಣಿ ಹತ್ಯೆಯ ಬಗ್ಗೆ ಕಿಡಿಕಾರಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾವೋವಾದಿಗಳು ಕಾಡಿನಲ್ಲಿರುವ ಬೆಲೆಬಾಳಉವ ಮರಗಳನ್ನು ಮಾರುವ ಮೂಲಕ ಹಣ ಸಂಪಾದಿಸಿ ಜಂಗಲ್ ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.