ಮುದ್ದೇಬಿಹಾಳ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗಣಿ ಮಾಲೀಕರಾದ ಎ.ಎಸ್. ಪಾಟೀಲ ನಡವಳ್ಳಿ ಅವರು ತಮ್ಮ ಮಗನ ವಿವಾಹದ ಜೊತೆ ನಡೆಸಲುದ್ದೇಶಿಸಿದ್ದ ಸಾಮೂಹಿಕ ವಿವಾಹಕ್ಕೆ ಚುನಾವಣಾ ಆಯೋಗ ನಕಾರ ಸೂಚಿಸಿದೆ.
ಇದರಿಂದಾಗಿ ಚುನಾವಣಾ ಆಯೋಗದ ನೀತಿ ಸಂಹಿತೆಯ ಬಿಸಿ ರಾಜ್ಯಪಾಲರು ನಡೆಸುತ್ತಿದ್ದ ಜನತಾದರ್ಶನಕ್ಕೆ ತಟ್ಟಿದ ಬೆನ್ನಲ್ಲೇ, ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ನಡೆಸುವ ಸಾಮೂಹಿಕ ವಿವಾಹಕ್ಕೂ ಇದರ ಬಿಸಿ ತಟ್ಟಿದಂತಾಗಿದೆ.
ಎ.ಎಸ್. ಪಾಟೀಲ ಸಮಾಜ ಸೇವಕರೆಂಬ ಕಾರಣಕ್ಕೆ ಆಯೋಗ ಸಾಮೂಹಿಕ ವಿವಾಹ ನಡೆಸಲು ಅನುಮತಿ ನೀಡಿತ್ತು. ಆದರೆ ಪಾಟೀಲ ನಡವಳ್ಳಿ ಅವರು ಮುದ್ದೇಬಿಹಾಳ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೋರಿದ್ದಾರೆ ಎಂಬ ವಿಷಯ ಆಯೋಗಕ್ಕೆ ತಿಳಿಯುತ್ತಿದ್ದಂತೆ ಸಾಮೂಹಿಕ ವಿವಾಹ ನಡೆಸದಂತೆ ಸೂಚಿಸಿ ಅನುಮತಿ ಹಿಂದಕ್ಕೆ ಪಡೆದಿದೆ.
ಮಗನ ವಿವಾಹವನ್ನು ನಡೆಸಲಿ, ಆದರೆ ಸಾಮೂಹಿಕ ವಿವಾಹವನ್ನು ಚುನಾವಣೆ ಮುಗಿದ ನಂತರ ನೆರವೇರಿಸುವಂತೆ ಆಯೋಗ ಪಾಟೀಲರಿಗೆ ಆಯೋಗ ಸೂಚನೆ ನೀಡಿದೆ. ಸಾಮೂಹಿಕ ವಿವಾಹಗಳು ಮತದಾರರ ಮೇಲೆ ಪರಿಣಾಮ ಬೀರಲು ಸಾಧ್ಯವಿರುವುದರಿಂದ ಆಯೋಗ ಈ ತೀರ್ಮಾನ ಕೈಗೊಂಡಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
|