ಮಂತ್ರಿಗಳು, ಸಚಿವರು ಸೇರಿದಂತೆ 'ಗಣ್ಯ' ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸುವ ಸಲುವಾಗಿ, ಇನ್ನು ಮುಂದೆ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ಶಂಕರಿ ಬಿದರಿ ತಿಳಿಸಿದ್ದಾರೆ.
ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಹೊರತುಪಡಿಸಿ ರಾಜ್ಯದ ಇನ್ಯಾವುದೇ ಗಣ್ಯ ವ್ಯಕ್ತಿಗಳು ಸಂಚರಿಸುವಾಗ ಸಂಚಾರ ಸ್ಥಗಿತಗೊಳಿಸದಿರಲು ಇಲಾಖೆ ನಿರ್ಧರಿಸಿದೆ. ಇದರಿಂದ ಜನ ಸಾಮಾನ್ಯರು ಗಣ್ಯ ವ್ಯಕ್ತಿಗಳ ಕಿರಿಕಿರಿಯಿಂದ ಮುಕ್ತಿ ಪಡೆಯುವಂತಾಗಿದೆ.
ಗಣ್ಯ ವ್ಯಕ್ತಿಗಳ ಸಂಚಾರ ಸಮಯದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿದರಿ ವಿವರಿಸಿದ್ದು, ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಷ್ಟ್ರೀಯ ನಾಯಕರು ಹಾಗೂ ವಿದೇಶಿ ಗಣ್ಯರಿಗೆ ಸಂಚಾರ ತೆರವು ಸೌಲಭ್ಯ ಲಭ್ಯವಾಗುತ್ತದೆ ಎಂದರು.
|