ಉದ್ಯಾನ ನಗರ ಬೆಂಗಳೂರಿನ ಸೌಂದರ್ಯ ಹಾಳುಗೆಡವುತ್ತಿರುವ ಫ್ಲೆಕ್ಸ್ ಮತ್ತು ಬ್ಯಾನರ್, ಬಂಟಿಂಗ್ಸ್ಗಳನ್ನು ಇನ್ನು ಮುಂದೆ ಕಟ್ಟುವಂತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರದಂದು ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಇಂದು ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಎಂ. ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದ್ದಾರೆ. ಈ ಜಾಹೀರಾತುಗಳಿಗೆ ವಿಧಿಸಿರುವ ನಿಷೇಧ ಇಂದಿನಿಂದಲೇ ಜಾರಿಗೊಳ್ಳಲಿದೆ ಎಂದು ಅವರು ಹೇಳಿದರು.
ನಗರದಲ್ಲಿ ಅಧಿಕಾರಿಗಳ ಶಾಮೀಲಿನೊಂದಿಗೆ ಗುತ್ತಿಗೆದಾರರು ನಡೆಸುತ್ತಿದ್ದಾರೆ ಎನ್ನಲಾಗಿರುವ ಸಾವಿರಾರು ಕೋಟಿ ರೂ.ಗಳ ಲಾಬಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಗರವನ್ನು ಜಾಹೀರಾತು ಮುಕ್ತ ಪ್ರದೇಶವನ್ನಾಗಿ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದ್ದು, ಇದಕ್ಕೆ ಹೊಸ ಜಾಹೀರಾತು ನೀತಿಯನ್ನೊಂದನ್ನು ವಾರದ ಅವಧಿಯೊಳಗೆ ರಚಿಸಲಾಗುವುದು ಎಂದು ತಿಳಿಸಿದ ಅವರು, ಈಗಾಗಲೇ ಗುತ್ತಿಗೆ ನೀಡಲಾಗಿರುವ ಜಾಹೀರಾತುಗಳನ್ನು ಕೂಡ ಅವಧಿ ಮುಗಿದ ತಕ್ಷಣದಿಂದಲೇ ತೆರವುಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
|