ರಾಜ್ಯದಲ್ಲಿ ಇನ್ನು ಒಂದು ವಾರ ಮಳೆ ಬಾರದೆ ಇದ್ದಲ್ಲಿ ಇಡೀ ರಾಜ್ಯವನ್ನೇ ಬರಪೀಡಿತವೆಂದು ಘೋಷಿಸಿ, ರಾಜ್ಯಕ್ಕೆ ನೆರವು ಕೋರಿ ಸರ್ವಪಕ್ಷಗಳ ನಿಯೋಗ ದೆಹಲಿಗೆ ತೆರಳುವ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಈಗ ತೀವ್ರ ಮಳೆ ಕೊರತೆ ಕಂಡುಬಂದಿದ್ದು, ಒಂದು ವಾರದ ಬಳಿಕವೂ ಇದೇ ಪರಿಸ್ಥಿತಿ ಮುಂದುವರಿದರೆ 'ಬರ ಪೀಡಿತ'ವೆಂದು ಘೋಷಣೆ ಮಾಡಿ ಕೇಂದ್ರಕ್ಕೆ ನಿಯೋಗವನ್ನು ಕಳುಹಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 40 ತಾಲೂಕುಗಳನ್ನು ಈಗಾಗಲೇ ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಪರಿಹಾರ ಕಾರ್ಯವನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ ಕಂದಾಯ ಸಚಿವ ಕರುಣಾಕರ ರೆಡ್ಡಿಯವರ ಮಾತಿಗೆ ಒಪ್ಪದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ವಾರ ಕಾದು ನೋಡೋಣ ಬಳಿಕ ತೀರ್ಮಾನಿಸೋಣ ಎಂದು ತಿಳಿಸಿದರು.
ನಿವೃತ್ತಿ ವಯಸ್ಸು: ಜು.1ರಿಂದ ಜಾರಿ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 50 ರಿಂದ 60 ವರ್ಷಕ್ಕೆ ಏರಿಸಿರುವುದು ಜುಲೈ ಒಂದರಿಂದಲೇ ಜಾರಿಗೆ ತರುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಬಜೆಟ್ನಲ್ಲಿ ಘೋಷಣೆ ಮಾಡಲಾಗಿರುವ ನಿವೃತ್ತಿ ವಯಸ್ಸು ಹೆಚ್ಚಳವನ್ನು ಜುಲೈ 1ರಿಂದಲೇ ಜಾರಿಗೊಳಿಸುವುದು ಸೂಕ್ತ ಎಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
|