ವಲಸಿಗರಿಗೆ ಮಣೆ ಹಾಕುವ ಮೂಲಕ ಭುಗಿಲೆದ್ದ ಆಂತರಿಕ ಭಿನ್ನಮತ ಈಗ ಬಹಿರಂಗಗೊಂಡಿದೆ. ಪಕ್ಷದ ಹಿರಿಯ ಶಾಸಕರು ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ನಿಗಮ ಮಂಡಳಿಗಳ ಅಧ್ಯಕ್ಷಗಿರಿ ತಮಗೆ ಬೇಡ. ನೀಡುವುದಾದರೆ ಸಚಿವ ಸ್ಥಾನ ನೀಡಲಿ ಎಂದು ಬಿಜೆಪಿಯ ಹಿರಿಯ ಶಾಸಕ ಮೈಸೂರಿನ ಹೆಚ್.ಎಸ್. ಶಂಕರಲಿಂಗೇಗೌಡ ಕಿಡಿಕಾರಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳು ಗಂಜಿ ಕೇಂದ್ರಗಳಾಗಿವೆ. ಅಂತಹ ಗಂಜಿ ಕೇಂದ್ರಗಳ ಅಧ್ಯಕ್ಷಗಿರಿ ತಮಗೆ ನೀಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ತಮಗೆ ಸಚಿವ ಸ್ಥಾನ ನೀಡಬೇಕು. ಅದು ಬಿಟ್ಟು ಬೇರೆ ಯಾವುದೇ ಸ್ಥಾನಮಾನವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿದ್ದಾಗ ಮೌನವಾಗಿ ಪ್ರತಿಭಟನೆ ನಡೆಸಿದ್ದೇನೆ. ಈಗ ವಲಸಿಗರಿಗೆ ಸ್ಥಾನ ನೀಡುವುದು ತಮಗೆ ಬೇಸರ ತಂದಿದೆ. ಆದರೂ ಪಕ್ಷಕ್ಕಾಗಿ ಎಲ್ಲವನ್ನು ಸಹಿಸಬೇಕಾಗುತ್ತದೆ ಎಂದಿದ್ದಾರೆ.
ಈ ಮೊದಲು ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಬಿಜೆಪಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರೆ ಎಂಬ ವದಂತಿಗಳು ಹಬ್ಬಿದ ಬೆನ್ನಲ್ಲೆ ಶಾಸಕರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
|