ಮುಂಬೈಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಎನ್ಎಸ್ಜಿ ಕಮಾಂಡೊ ಪಡೆಯ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಉನ್ನಿಕೃಷ್ಣನ್ ಅವರು ಸಾಂತ್ವಾನ ಹೇಳಲು ಬಂದ ರಾಜಕಾರಣಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಸಂದೀಪ್ ಸಾವಿನ ಬಳಿಕ ಇಸ್ರೋ ಲೇ ಔಟ್ನಲ್ಲಿರುವ ಅವರ ನಿವಾಸಕ್ಕೆ ರಾಜಕಾರಣಿಗಳ ದಂಡೇ ಹರಿದು ಬರುತ್ತಿದೆ. ಆದರೆ ಅದು ಅವರಿಗೆ ಇಷ್ಟವಿಲ್ಲ. ರಾಜಕಾರಣಿಗಳು ಬರುವುದು ಕೇವಲ ರಾಜಕೀಯಕ್ಕಾಗಿ ಎಂಬುದು ಉನ್ನಿಕೃಷ್ಣನ್ ಅಭಿಪ್ರಾಯ. ಭಾನುವಾರ ಉನ್ನಿಕೃಷ್ಣನ್ ಮನೆಗೆ ಭೇಟಿ ನೀಡಿದ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಹಾಗೂ ಗೃಹ ಸಚಿವರಿಗೆ ಮನೆಯೊಳಕ್ಕೆ ಕಾಲಿಡದಂತೆ ಹರಿಹಾಯ್ದಿದ್ದರು.
ನಿಮ್ಮನ್ನು ಇಲ್ಲಿಗೆ ಬರಲು ಹೇಳಿದವರು ಯಾರು? ರಾಜಕಾರಣಿಗಳು ಮನೆಗೆ ಬರುವುದು, ನನ್ನ ಮಗ ರಾಜಕೀಯ ವಸ್ತುವಾಗುವುದು ನನಗೆ ಇಷ್ಟವಿಲ್ಲ. ಪ್ಲೀಸ್ ಗೇಟ್ ಔಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇರಳ ಮುಖ್ಯಮಂತ್ರಿ ಅಚ್ಯುತಾನಂದ ಭೇಟಿಗೂ ಕಾರಣವಿದೆ. ಉನ್ನಿಕೃಷ್ಣನ್ ಮೂಲತಃ ಕೇರಳದವರು. ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಂದೀಪ್ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ ಎಂಬ ಆಕ್ಷೇಪ ವ್ಯಕ್ತವಾದ್ದರಿಂದ ಅಚ್ಯುತಾನಂದನ್ ಭಾನುವಾರ ಮುಂಬೈಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು.
ಮುಖ್ಯಮಂತ್ರಿ ಜೊತೆ ಬಂದಿದ್ದ ಗೃಹ ಸಚಿವರು ಉನ್ನಿಕೃಷ್ಣನ್ ಕೋಪ ನೋಡಿ ಒಳ ಪ್ರವೇಶಿಸುವ ಧೈರ್ಯ ಮಾಡಲಿಲ್ಲ. ಯಾವುದೇ ಕಾರಣಕ್ಕೂ ರಾಜಕಾರಣಿಗಳಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.
|