ನಗರದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಸ್ಥಾಪಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶರನ್ನು ಹಾಗೂ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿ ನೆರೆ ರಾಜ್ಯಗಳ ವಕೀಲರೊಂದಿಗೆ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕರ್ನಾಟಕ ವಕೀಲರ ಒಕ್ಕೂಟದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ಅನೇಕ ಬಾರಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರವನ್ನು ಮನವಿ ಮೂಲಕ ಕೋರಲಾಗಿದೆ. ಆದರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸುಮಾರು 300ವಕೀಲರೊಂದಿಗೆ ದೆಹಲಿ ಚಲೋ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು.
ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಕುಟುಂಬ ನ್ಯಾಯಾಲಯವನ್ನು ವರ್ಗಾಯಿಸುವುದರೊಂದಿಗೆ ವಕೀಲರ ನಿವೃತ್ತಿ ಅಥವಾ ಮರಣ ಸಂಭವಿಸಿದಾಗ ಕರ್ನಾಟಕ ವಕೀಲರ ಪರಿಷತ್ತಿನಿಂದ ನೀಡಲಾಗುವ ಮೊತ್ತವನ್ನು 1.5ಲಕ್ಷದಿಂದ 3.5ಲಕ್ಷಕ್ಕೆ ಹೆಚ್ಚಿಸಿ ಕಲ್ಯಾಣ ನಿಧಿಯಲ್ಲಿ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. |