ಕೇಂದ್ರದ ರೈಲ್ವೆ ಬಜೆಟ್ ಅಗ್ಗದ ಜನಪ್ರಿಯತೆಗಳಿಸುವ ಪ್ರಯೋಗವಾಗಿದ್ದು, ರಾಜ್ಯದ ದೃಷ್ಟಿಯಿಂದ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಟೀಕಿಸಿದ್ದಾರೆ. ರೈಲ್ವೆ ರಾಜ್ಯಮಂತ್ರಿ ಕೆ.ಎಚ್.ಮುನಿಯಪ್ಪ ಸೇರಿದಂತೆ ನಾಲ್ವರು ಕೇಂದ್ರ ಮಂತ್ರಿಗಳಿದ್ದರೂ ರಾಜ್ಯದ ರೈಲ್ವೆ ಅಭಿವೃದ್ದಿಗೆ ಆದ್ಯತೆ ಕೊಡದಿರುವುದು ವಿಷಾದವೇ ಸರಿ. ಇದು ಕಾಂಗ್ರೆಸ್ ಸರ್ಕಾರದ ಪಕ್ಷಪಾತ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.ಹುಬ್ಬಳ್ಳಿ-ಅಂಕೋಲ, ಬೀದರ್-ಗುಲ್ಬರ್ಗ, ಕೊಟ್ಟೂರು- ಹರಿಹರ, ಶಿವಮೊಗ್ಗ-ತಾಳಗುಪ್ಪ, ಮುನಿರಾಬಾದ್-ಮೆಹಬೂಬ್ ನಗರ ಹೊಸ ರೈಲು ಮಾರ್ಗಗಳು ನೆನೆಗುದಿಗೆ ಬಿದ್ದಿವೆ. ಕೆಲವು ಹೊಸ ರೈಲುಗಳನ್ನು ಮುಖ್ಯಮಂತ್ರಿಗಳು, ಬಿಜೆಪಿ ಸಂಸದರ ಒತ್ತಾಯದ ಮೇರೆಗೆ ಘೋಷಿಸಿದ್ದರೂ, ಸಹ ತಡೆರಹಿತ ರೈಲುಗಳನ್ನು ದೇಶದ ಮಾಹಿತಿ ತಂತ್ರಜ್ಞಾನ ಕೇಂದ್ರ ಮತ್ತು ವಾಣಿಜ್ಯ ಕೇಂದ್ರದ ರಾಜಧಾನಿಗೆ ಈ ರೀತಿಯ ಅತಿವೇಗದ ರೈಲುಗಳನ್ನು ಘೋಷಿಸದೇ ಇರುವುದು ಪಕ್ಷಪಾತಧೋರಣೆ ಎಂದು ಅವರು ದೂರಿದರು.ಇದೇ ವೇಳೆ ರೈಲ್ವೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ, ರಾಜ್ಯದ ಪಾಲಿಗೆ ಮಿಶ್ರ ಫಲಿತಾಂಶದ ಬಜೆಟ್. ಕರ್ನಾಟಕವನ್ನು ಪೂರ್ಣವಾಗಿ ಕಡೆಗಣಿಸಿಲ್ಲ. ಆದರೆ ಆದ್ಯತೆಯನ್ನು ನೀಡಿಲ್ಲ. ಅರ್ಧಕ್ಕೆ ನಿಂತ ಯೋಜನೆಗಳು ಮತ್ತು ಹೊಸ ಯೋಜನೆಗಳ ಬಗೆಗೆ ಒತ್ತು ನೀಡದಿರುವುದು ದುರದೃಷ್ಟಕರ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ. |