ಇಂದು ರಾಜ್ಯದಾದ್ಯಂತ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹಲವೆಡೆ ನಾಗಬನ ಹಾಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಕುಕ್ಕೇ ಸುಬ್ರಹ್ಮಣ್ಯ, ಕುಡುಪು ಅನಂತ ಪದ್ಮನಾಭ ದೇವಸ್ಥಾನ ಸೇರಿದಂತೆ ರಾಜ್ಯದ ಬಹುತೇಕ ದೇವಳಗಳಲ್ಲಿಂದು ವಿಶೇಷ ಪೂಜೆ. ನಾಗನಿಗೆ ಹಾಲೆರೆಯುವುದು, ಸೀಯಾಳ ಅಭಿಷೇಕ, ಹಾಲಭಿಷೇಕ, ನಾಗತಂಬಿಲ ಸೇವೆಯು ವಿಜೃಂಭಣೆಯಿಂದ ನಡೆಯಿತು.
ಬೆಂಗಳೂರಿನಲ್ಲೂ ಹಲವು ದೇವಸ್ಥಾನಗಳಲ್ಲಿ ಹಾಗೂ ನಾಗಕಟ್ಟೆಗಳಲ್ಲಿ ನಾಗನ ವಿಶೇಷ ಪೂಜೆಗಳು ನಡೆಯುತ್ತಿವೆ. ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮುಂಜಾನೆ ಹೊತ್ತಿಗೆ ಮೂರು ಲಕ್ಷ ಭಕ್ತರು ನೆರೆದಿದ್ದ ವರದಿಗಳೂ ಬಂದಿವೆ. ಇಲ್ಲಿ ಪ್ರತೀ ವರ್ಷ ನಾಗರ ಪಂಚಮಿ ದಿನ 10 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನಕ್ಕಾಗಿ ಆಗಮಿಸುವುದು ವಿಶೇಷ.
ರಾಜ್ಯದ ಇತರ ಭಾಗಗಳಲ್ಲೂ ನಾಗ ಭಕ್ತರು ಇಂದು ಮುಂಜಾನೆಯಿಂದಲೇ ತಂಡೋಪತಂಡವಾಗಿ ಹತ್ತಿರದ ನಾಗ ಬನಗಳು ಮತ್ತು ದೇವಸ್ಥಾನಗಳಿಗೆ ಸೀಯಾಳ ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಹಿಂದೂಗಳ ಮೊದಲನೇ ಹಬ್ಬವಾಗಿರುವ ನಾಗರ ಪಂಚಮಿಯನ್ನು ಶ್ರಾವಣ ಮಾಸದ ಮೊದಲಾರ್ಧದ ಐದನೇ ದಿನ ಆಚರಿಸಲಾಗುತ್ತಿದ್ದು, ಭಾರೀ ಸಡಗರದಿಂದ ಹಬ್ಬಗಳನ್ನು ಸ್ವಾಗತಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ.
ಉತ್ತರ ಭಾರತದಲ್ಲಿ ಇದನ್ನು ರಕ್ಷಾಬಂಧನ ಎಂದು ಆಚರಿಸಿದರೆ, ದಕ್ಷಿಣ ಭಾರತದಲ್ಲಿ ನಾಗ ಹುತ್ತಗಳಿಗೆ ಹಾಲೆರೆಯುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ಬಾಂಧವ್ಯ ವೃದ್ಧಿಯಾಗುವ ದಿನವೆಂದೂ ಈ ದಿನವನ್ನು ಪರಿಗಣಿಸಲಾಗುತ್ತದೆ.
|