'ಎಲ್ಲಿ ಬುದ್ದಿಜೀವಿಗಳು ಹೆಚ್ಚಿದ್ದಾರೋ ಅಲ್ಲಿ ಕೋಮು ಸೌಹಾರ್ದತೆ ಕೆಡುತ್ತಿದೆ. ಅವರಿಲ್ಲದ ಕಡೆ ಧಾರ್ಮಿಕ ಸೌಹಾರ್ದತೆ ಉಳಿದುಕೊಂಡಿದೆ. ಇಂತಹ ವಾತಾವರಣ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ' ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ವಿ.ಎಸ್.ಮಳೀಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ಬುದ್ಧಿಜೀವಿಗಳ ಸಂಘಟನೆ(ಎಐಸಿಒಐ) ನಗರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಬುದ್ದಿಜೀವಿಗಳ ಸಮ್ಮೇಳನ ಅಂಗವಾಗಿ 'ಕೋಮು ಸೌಹಾರ್ದತೆಯಲ್ಲಿ ಬುದ್ದಿಜೀವಿಗಳ ಪಾತ್ರ' ವಿಷಯ ಕುರಿತು ಅವರು ಮಾತನಾಡಿದರು.
ಬುದ್ದಿಜೀವಿಗಳು ಹೆಚ್ಚು ಬುದ್ದಿ ತೋರಿಸುವುದನ್ನು ಬಿಟ್ಟು ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ಆಗ ಮಾತ್ರವೇ ಅವರು ಎಲ್ಲರೊಂದಿಗೆ ಬೆರೆತು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ನೀಡಲಾದ ಕರ್ನಾಟಕ ಹೆಮ್ಮೆಯ ಪುತ್ರ ಪ್ರಶಸ್ತಿಗೆ ಒಬ್ಬ ಮಹಿಳೆಯನ್ನೂ ಆಯ್ಕೆ ಮಾಡದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಪ್ರಶಸ್ತಿಗೆ ಅರ್ಹರಾಗುವಷ್ಟು ವನಿತೆಯರು ನಮ್ಮಲ್ಲಿ ಸಾಕಷ್ಟಿದ್ದಾಗ್ಯೂ ಅವರಿಗೆ ಪ್ರಶಸ್ತಿ ನೀಡದಿರುವುದು ವಿಷಾದನೀಯ ಎಂದರು.
ಸಮಾಜದಿಂದ ಬುದ್ದಿಜೀವಿಗಳು ಸಾಕಷ್ಟು ಪಡೆದುಕೊಂಡಿದ್ದಾರೆ. ಅವರು ಈಗ ಸಮಾಜಕ್ಕೆ ತಮ್ಮ ಕೊಡುಗೆ ಸಲ್ಲಿಸಲು ಇದು ಸಕಾಲ ಎಂದು ಸುಪ್ರೀಂಕೋರ್ಟ್ ನ್ಯಾ.ವಿ.ಎಸ್.ಸಿರ್ಪುರ್ಕರ್ ತಿಳಿಸಿದರು.