ನೆರೆ ಸಂತ್ರಸ್ಥರು ಅತಂತ್ರರಾಗಿರುವ ಸಂದರ್ಭದಲ್ಲಿ ರಾಜಕೀಯ ಗೊಂದಲ ಸರಿಯಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಇನ್ನಾದ್ರೂ ಹುಡುಗಾಟ ನಿಲ್ಲಿಸಲಿ ಎಂದು ತಿಳಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಮಸ್ಯೆಯನ್ನು ಪರಿಹರಿಸಿ, ನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಸಲಹೆ ನೀಡಿದರು.
ಬಿಜೆಪಿ ಪಕ್ಷದ ಹೈಕಮಾಂಡ್ ಕೂಡ ಗೊಂದಲದ ವಿಚಾರವನ್ನು ತ್ವರಿತವಾಗಿ ಬಗೆಹರಿಸದೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದರು. ಸರ್ಕಾರದಲ್ಲಿ ಅಸ್ಥಿರತೆ ತಾಂಡವವಾಡುತ್ತಿದ್ದರೆ, ಮುಖ್ಯಮಂತ್ರಿಗಳು ಮನೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಮುಂದುವರಿಸಿದ್ದಾರೆ. ಮೊದಲು ಗುದ್ದಲಿ ಪೂಜೆ ನಿಲ್ಲಿಸಿ ಪಕ್ಷದಲ್ಲಿನ ಬಿಕ್ಕಟ್ಟು ಬಗೆಹರಿಸಿಕೊಳ್ಳಲಿ ಎಂದರು.
ರೆಸಾರ್ಟ್ನಲ್ಲಿ ಸುಮಾರು 60ಮಂದಿ ಶಾಸಕರಿದ್ದಾರೆ. ಆ ಶಾಸಕರ ಕ್ಷೇತ್ರಗಳಿಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಯಾವಾಗ ಭೇಟಿ ನೀಡುತ್ತಾರೋ ಗೊತ್ತಿಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಗೊಂದಲವನ್ನು ಬೇಗ ಬಗೆಹರಿಸಿಕೊಳ್ಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಿಜೆಪಿಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಎರಡೂ ಬಣಗಳ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದು, ಭಿನ್ನಾಭಿಪ್ರಾಯವನ್ನು ತಮ್ಮಲ್ಲೇ ಚರ್ಚಿಸಿಕೊಂಡು ಸರಿಪಡಿಸಿಕೊಳ್ಳುವಂತೆ ಅವರಿಗೆ ಸಲಹೆ ನೀಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.