ಮಗಳೊಂದಿಗೆ ಜಗಳವಾಡಿದ್ದಕ್ಕೆ ಪ್ರಶ್ನಿಸಿದ ಅತ್ತೆಯನ್ನು ಅಳಿಯನೇ ಇರಿದು ಕೊಲೆಗೈದಿರುವ ಅಮಾನವೀಯ ಘಟನೆ ಅತ್ತಿಬೆಲೆ ಬಳಿಯ ಹುಲಿಮಂಗಲದಲ್ಲಿ ನಡೆದಿದೆ.
ಪತ್ನಿಯೊಂದಿಗೆ ನಡೆದ ಜಗಳವನ್ನು ಬಿಡಿಸಲು ಅತ್ತೆ ಸರೋಜಮ್ಮ(45)ರವರನ್ನು ಬೈಕ್ನಲ್ಲಿ ಅಳಿಯ ಉಮಾಪತಿ ಕರೆ ತರುತ್ತಿದ್ದ ವೇಳೆ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ.
ಸರೋಜಮ್ಮ ಮಗಳ ಪರ ವಹಿಸಿಕೊಂಡು ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಅಳಿಯ ಉಮಾಪತಿ ಅತ್ತೆಯನ್ನು ಕರೆದೊಯ್ಯುವ ಮಾರ್ಗಮಧ್ಯೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸರೋಜಮ್ಮನ ಮಗಳು ಕಾವ್ಯಳನ್ನು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಉಮಾಪತಿಗೆ ಕಳೆದ 6ತಿಂಗಳ ಹಿಂದೆ ವಿವಾಹ ಮಾಡಿ ಕೊಡಲಾಗಿತ್ತು. ಉಮಾಪತಿ ಹಾಗೂ ಕಾವ್ಯಳ ನಡುವೆ ಇತ್ತೀಚೆಗೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ಜಗಳ ಮಿತಿ ಮೀರಿದಾಗ ವಿಷಯವನ್ನು ಉಮಾಪತಿ ಮಾವ ರಾಮಚಂದ್ರ ಅವರಿಗೆ ತಿಳಿಸಿ ಮಗಳಿಗೆ ಬುದ್ಧಿ ಹೇಳುವಂತೆ ಕೇಳಿಕೊಂಡ. ಅದರಂತೆ ರಾಮಚಂದ್ರರ ಮನೆಗೆ ಉಮಾಪತಿ ನಿನ್ನೆ ಬೆಳಿಗ್ಗೆ ಬಂದಿದ್ದು, ರಾಮಚಂದ್ರ ಅವರು ಪತ್ನಿಯನ್ನು ಮಗಳಿಗೆ ಬುದ್ಧಿ ಹೇಳಲು ಅಳಿಯನೊಂದಿಗೆ ಕಳುಹಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಉಮಾಪತಿಗಾಗಿ ತೀವ್ರ ಶೋಧ ನಡೆಸಿದ್ದಾರೆ.