ದಿನದಿಂದ ದಿನಕ್ಕೆ ರಾಜ್ಯ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಬಿಗಡಾಯಿಸುತ್ತರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇದರ ಲಾಭ ಪಡೆಯಲು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿರುವ ಅಂಶದ ಕುರಿತು ಊಹಾಪೋಹದ ಮಾತುಗಳು ಕೇಳಿ ಬರತೊಡಗಿವೆ.
ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಪಕ್ಷದ ಆಂತರಿಕ ವಿಷಯವಾಗಿದ್ದು, ಆ ಬಗ್ಗೆ ನಾವು ಹೆಚ್ಚೇನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಈಗಿರುವಂತೆ ಬಿಕ್ಕಟ್ಟು ಇನ್ನೂ ಬಜೆಪಿ ಆಂತರಿಕ ವಲಯದಲ್ಲಿಯೇ ಇದೆ. ಸಿ.ಎಂ.ಬದಲಾವಣೆಗೆ ರೆಡ್ಡಿ ಬ್ರದರ್ಸ್ ತಂಡ ಬಂಡಾಯವೆದ್ದರೆ ಆಗ ಯಾವ ಸ್ವರೂಪದಲ್ಲಿ ಮಧ್ಯ ಪ್ರವೇಶಿಸಬಹುದು ಎಂಬ ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ದೆಹಲಿಯಲ್ಲಿ ಲೆಕ್ಕಚಾರದಲ್ಲಿ ತೊಡಗಿವೆ.
ರೆಡ್ಡಿ ಸೋದರರು ಬಂಡಾಯವೆದ್ದು ಬಿಜೆಪಿಯಿಂದ ಹೊರಬಿದ್ದರೆ ಆಗ ಕಾಂಗ್ರೆಸ್ ಸಹಾಯಹಸ್ತ ಚಾಚಬಹುದು ಎಂಬ ಮಾತುಗಳು ದಟ್ಟವಾಗಿವೆ. ರೆಡ್ಡಿಗಳಿಗೆ 79 ಶಾಸಕರ ಬೆಂಬಲದ ಅಗತ್ಯವಿದೆ. ಯಡಿಯೂರಪ್ಪ ಬಣದ ಶಾಸಕರು 27 ಶಾಸಕ ಬಲ ಹೊಂದಿರುವ ಜೆಡಿಎಸ್ ನೆರೆವಿನೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸುವ ಸಾಧ್ಯತೆಯಿದೆ.
ಒಟ್ಟಾರೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಈ ಮೊದಲು ಭಿನ್ನಮತದ ಲಾಭ ಪಡೆಯಲು ಹೋಗಲ್ಲ ಎಂದೆನ್ನುತ್ತಿದ್ದರೆ, ಈಗ ಎರಡೂ ಪಕ್ಷಗಳ ಮುಖಂಡರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.