'ವಂದೇ ಮಾತರಂ ಹಾಡುವುದು ಸಾಧ್ಯವಿಲ್ಲ ಎಂದಾದರೆ ಅರಬ್ಬೀ ಸಮುದ್ರ ಇದೆ, ಬಂಗಾಳ ಕೊಲ್ಲಿ ಇದೆ, ಹಿಂದೂಮಹಾಸಾಗರ ಇದೆ, ಹೋಗಿ ಬೀಳಬಹುದು...ಅದೂ ಆಗದಿದ್ದರೆ ವಿಮಾನಗಳಿವೆ ದೇಶ ಬಿಟ್ಟೂ ಹೋಗಬಹುದು' ಇದು ಶುಕ್ರವಾರ ಇಲ್ಲಿನ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ-2009 ಕನ್ನಡ ನಾಡು ನುಡಿಯ ಆರನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರ ಕಿಡಿನುಡಿ.
ಇತ್ತೀಚೆಗಷ್ಟೇ ರಾಷ್ಟ್ರಗೀತೆ ವಂದೇ ಮಾತರಂ ಹಾಡಬಾರದು ಎಂದು ಇಸ್ಲಾಂ ಪಂಡಿತರು ಹೊರಡಿಸಿದ ಫತ್ವಾಕ್ಕೆ ಪ್ರತಿಕ್ರಿಯಿಸಿ ಡಾ.ಹಂಪ ನಾಗರಾಜಯ್ಯಮಾತನಾಡಿದರು.
ಎಲ್ಲ ಧರ್ಮಗಳಲ್ಲೂ ವಿವೇಕಿಗಳು, ಅವಿವೇಕಿಗಳೂ ಇರುತ್ತಾರೆ. ಅವಿವೇಕಿಗಳ ಮಾತು ಅನೇಕ ವೇಳೆ ಗಟ್ಟಿಯಾಗಿ ಕೇಳಿದರೂ ಅಂತಿಮವಾಗಿ ವಿವೇಕಿಗಳು ಅವಿವೇಕಿಗಳನ್ನು ಬಗ್ಗುಬಡಿಯುತ್ತಾರೆ. ಅನೇಕ ಇಸ್ಲಾಮಿಕ್ ಸಂಘಟನೆಗಳೇ ಈ ಫತ್ವಾ ವಿರೋಧಿಸಿದ್ದಾರೆ ಎನ್ನುವುದು ಸ್ವಾಗತಾರ್ಹ ಎಂದರು.
ಕನ್ನಡವೊಂದೇ ಎಂಬ ಹಠ ಒಳ್ಳೆಯದಲ್ಲ: ಇಂಗ್ಲಿಷ್ನ ಸುನಾಮಿಯಲ್ಲಿ ಕನ್ನಡ ಕೊಚ್ಚಿ ಹೋದೀತೆಂಬ ಆತಂಕ ಬೇಡ.ಸಂಸ್ಕೃತ ಪ್ರಾಕೃತಾದಿಗಳನ್ನು ನುಂಗಿ ನೀರು ಕುಡಿದ ಕನ್ನಡವು ಭಾಷಾ ಸಮನ್ವಯ ಸ್ವರೂಪದಲ್ಲಿ ಸಂಭವಿಸಿರುವ ಇಂಗ್ಲಿಷ್ನ ಅನಿವಾರ್ಯತೆಯನ್ನು ಅರಗಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೇ ಕನ್ನಡವೊಂದೇ ಎಂಬ ಹಠ ಒಳ್ಳೆಯದಲ್ಲ. ಅತಿಭಾವುಕತೆ ಮರೀಚಿಕೆ. ಕಟುವಾಸ್ತವಕ್ಕೆ ಮುಖಾಮುಖಿಯಾಗಿ ನಿಂತು ಪರಿಸ್ಥಿತಿ ಅವಲೋಕಿಸಬೇಕು. ಯಾವ ಭಾಷೆಯೂ ಶೂನ್ಯದಿಂದ ವ್ಯವಹಾರಗೊಳ್ಳುವುದಿಲ್ಲ. ಈವರೆಗಿನ ಹಾದಿಯನ್ನು ಗಮನಿಸಿದರೆ ಕನ್ನಡ ಬೆಳೆದು ಬಂದಿರುವುದು ಇತರ ಭಾಷೆಗಳ ಸಹಚರ್ಯದಿಂದ ಎಂಬುದು ಸ್ಪಷ್ಟ. ಇಂಗ್ಲಿಷ್ನ ಅನಿವಾರ್ಯತೆಯನ್ನು ಅಕ್ರಮಣಶೀಲತೆ ಎಂದು ಆಪಾದಿಸುವುದರಲ್ಲಿ ಹುರುಳಿಲ್ಲ ಎಂದು ವಿಶ್ಲೇಷಿಸಿದರು.
ಕನ್ನಡದ ಸೊಲ್ಲೇ ಇಲ್ಲದ ಮನೆಗಳು ರಾಜ್ಯದಲ್ಲಿ ಕುಡಿಯೊಡೆಯುತ್ತಿದೆ. ಲಕ್ಷಾಂತರ ವಿದ್ಯಾವಂತ ಕನ್ನಡಿಗ ಮಕ್ಕಳಿಗೆ ಕನ್ನಡ ಅಕ್ಷರ ಜ್ಞಾನವಿಲ್ಲ. ಈ ಸ್ಥಿತಿ ಮುಂದುವರಿದರೆ ಕನ್ನಡಕ್ಕೆ ಬರಗಾಲ ಖಂಡಿತ. ಹಳ್ಳಿಗಳಿಗ ಈಗ ಇಂಗ್ಲಿಷ್ ನುಗ್ಗಿದೆ ಎಂದರು.