ಯಾವ ಪುರುಷಾರ್ಥಕ್ಕೆ ಇವರನ್ನು ಆರಿಸಬೇಕಿತ್ತು?: ಲೋಕಾಯುಕ್ತ
ಬೆಂಗಳೂರು, ಶನಿವಾರ, 7 ನವೆಂಬರ್ 2009( 17:20 IST )
NRB
ರಾಜ್ಯದಲ್ಲಿನ ಬಿಜೆಪಿ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು, ಯಾವ ಪುರುಷಾರ್ಥಕ್ಕಾಗಿ ಈ ಚುನಾಯಿತ ಪ್ರತಿನಿಧಿಗಳು, ಮಂತ್ರಿಮಂಡಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹತ್ತಾರು ದಿನಗಳ ಬಿಜೆಪಿ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಮಂತ್ರಿಮಂಡಲದ ಅವಶ್ಯಕತೆ ಇಲ್ಲ ಎಂಬುದು ಸಾಬೀತಾದಂತಾಗಿದೆ ಎಂದು ಹೇಳಿದರು.
ಚುನಾವಣೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವೂ ಇಲ್ಲ, ಚುನಾಯಿತ ಪ್ರತಿನಿಧಿಗಳಾಗಲೀ ಅಥವಾ ಮಂತ್ರಿಮಂಡಲದ ಅವಶ್ಯಕತೆಯೂ ಇಲ್ಲ, ಇವರು ಯಾರೂ ಇಲ್ಲದಿದ್ದರೂ ರಾಜ್ಯದ ಆಡಳಿತ ನಡೆದುಕೊಂಡೇ ಹೋಗುತ್ತದೆ ಎಂದರು.
ನಗರದ ನಿಮಾನ್ಸ್ ಸಭಾಂಗಣದಲ್ಲಿ ಶನಿವಾರ ಭಾರತೀಯ ಗ್ಲುಕೋಮಾ ಸೊಸೈಟಿಯ ಮೂರು ದಿನಗಳ 19ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿರುವಾಗ ಇವರು ಮೋಜು ಮಾಡುತ್ತಿರುವುದು ಪ್ರಜಾಪ್ರಭುತ್ವವನ್ನೇ ಅಣಕ ಮಾಡಿದಂತೆ ಎಂದ ಅವರು, ಲೋಕಾಯುಕ್ತ ಪೊಲೀಸರು ನೆರೆ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.