ರಾಜ್ಯ ರಾಜಕಾರಣದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಪ್ರಹಸನಕ್ಕೆ ಜನರು ರೋಸಿ ಹೋಗಿ ವಿವಿಧ ರೀತಿಯ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಆ ನಿಟ್ಟಿನಲ್ಲಿ ಶನಿವಾರ ಜೆಡಿಎಸ್ ಯುವ ಘಟಕ ಕ್ಷೇತ್ರದಿಂದ ನಾಪತ್ತೆಯಾಗಿ ಮೋಜಿನಲ್ಲಿ ಕಾಲ ಕಳೆಯುತ್ತಿರುವ ಜನಪ್ರತಿನಿಧಿಗಳಿಗೆ ಪಿಂಡ ಪ್ರದಾನ ಮಾಡಿದ ವಿನೂತನ ಪ್ರತಿಭಟನೆ ನಡೆಯಿತು.
ಪ್ರವಾಹದಿಂದಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಜನಪ್ರತಿನಿಧಿಗಳು ಮಾತ್ರ ವೈಯಕ್ತಿಕ ಪ್ರತಿಷ್ಠೆ, ಅಧಿಕಾರದ ಆಸೆಯಿಂದಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿರುವ ಇಲ್ಲಿನ ಜೆಡಿಎಸ್ ಯುವ ಘಟಕದ ಪದಾಧಿಕಾರಿಗಳು ಶನಿವಾರ ಜನಪ್ರತಿನಿಧಿಗಳ ಫೋಟೊಗಳಿಗೆ ಹೂವಿನ ಹಾರ ಹಾಕಿ ತಿಥಿ ಕಾರ್ಯಕ್ರಮ ನಡೆಸಿ ವಿನೂತನ ಪ್ರತಿಭಟನೆ ನಡೆಸಿತು.
ಅಲ್ಲದೆ, ತಮ್ಮ ಕ್ಷೇತ್ರದ ನಾಯಕರು ಸಾವನ್ನಪ್ಪಿದ್ದು, ಅವರ ಪಿಂಡ ಪ್ರದಾನದ ಅಣಕು ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ ಎಂದು ಕೇರಿ, ಕೇರಿ ಡಂಗುರ ಸಾರಿ ಊಟೋಪಚಾರಕ್ಕೂ ಆಹ್ವಾನ ನೀಡಿತ್ತು.!
ಅದೇ ರೀತಿ ಶಾಸ್ತ್ರೋಕ್ತವಾಗಿ ನಾಯಕರ ಹೆಸರಲ್ಲಿ ತಿಥಿ ಕಾರ್ಯಕ್ರಮ ನೆರವೇರಿಸಿ, ತಮ್ಮ ನಾಯಕರು ಆಕಸ್ಮಿಕವಾಗಿ ಸಾವನ್ನಪ್ಪಿದರಲ್ಲ ಎಂದು ಬಾಯಿ, ಬಾಯಿ ಬಡಿದುಕೊಂಡು ರೋಧಿಸಿದರು...!ಕೊನೆಗೆ ಚಿತಾಭಸ್ಮವನ್ನೂ ಕೆರೆಗೆ ಬಿಟ್ಟರು. ಅಲ್ಲದೆ, ಭರ್ಜರಿ ಊಟೋಪಚಾರವೂ ನಡೆದಿತ್ತು. ಪಿಂಡ ಪ್ರದಾನ ನಂತರ ಇಟ್ಟ ಎಡೆಯನ್ನೂ ಕಾಗೆಗಳೂ ತಿನ್ನುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂಬುದು ಕೂಡ ಪ್ರತಿಭಟನಾಕಾರರ ಕುಹಕದ ಮಾತು!