ಅಕ್ರಮ ಗಣಿ ಪ್ರಕರಣ ಸಿಬಿಐಗೆ ವಹಿಸಿ: ರಾಜ್ಯಕ್ಕೆ ಜೇಠ್ಮಲಾನಿ
ಧಾರವಾಡ, ಮಂಗಳವಾರ, 24 ನವೆಂಬರ್ 2009( 11:47 IST )
ಆಂಧ್ರಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿನ ಗಣಿಧಣಿಗಳಾದ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಒಡೆತನದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿವಾದದ ಕುರಿತು ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ತಿಳಿಸಿದ್ದಾರೆ.
ಬಳ್ಳಾರಿಯ ಗಣಿಗಳಲ್ಲಿ ಒಂದಾದ ಎಂಎಸ್ಪಿಎಲ್ನ ರಾಹುಲ್ ಬಲ್ಡೋಟಾ ಪರವಾಗಿ ವಾದಿಸಲು ಸೋಮವಾರ ಹೈಕೋರ್ಟ್ನ ಧಾರವಾಡ ಸಂಚಾರಿ ಪೀಠದ ಎದುರು ಹಾಜರಾಗಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ರೆಡ್ಡಿ ಸಹೋದರರ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಕುರಿತು ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಸಿಬಿಐ ತನಿಖೆಗೆ ಒಪ್ಪಿಸಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೂಡ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ನಡೆಸಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ರನ್ವೇಯಲ್ಲಿ ಆಕಸ್ಮಿಕ ಬೆಂಕಿ: ಜೇಠ್ಮಲಾನಿ ಅವರು ಸೋಮವಾರ ವಿಶೇಷ ವಿಮಾನದಲ್ಲಿ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ರನ್ವೇಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಮಾನ ಇನ್ನೇನು ರನ್ವೇಯಲ್ಲಿ ಇಳಿಯಬೇಕೆನ್ನುವಷ್ಟರಲ್ಲಿ ರನ್ವೇಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ವಿಮಾನ ನಿಲ್ದಾಣದಲ್ಲಿದ್ದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದರು.