ಚಿಕ್ಕಬಳ್ಳಾಪುರ, ಶನಿವಾರ, 20 ಫೆಬ್ರವರಿ 2010( 17:31 IST )
PTI
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರು ಮನಸ್ಸು ಮಾಡಿದರೇ ನಾಳೆಯೇ ರಾಜ್ಯದ ಬಿಜೆಪಿ ಸರ್ಕಾರ ಪತನವಾಗುತ್ತೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
ನಗರದ ನಂದಿ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋನಿಯಾ ಬಯಸಿದ್ರೆ ನಾಳೆಯೇ ಬಿಜೆಪಿ ಸರ್ಕಾರ ಪತನವಾಗುತ್ತೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ದುರಾಸೆಯಿಲ್ಲ. ಕರ್ನಾಟಕದ ಪವಿತ್ರ ಭೂಮಿಯಲ್ಲಿ ಸ್ವಂತ ಸಾಮರ್ಥ್ಯದಿಂದಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಆಶಯ ಎಂದು ರೋಶಾವೇಷದಿಂದ ಹೇಳಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಅಧಿಕಾರ ತ್ಯಾಗ ಮಾಡಿ ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣದೆ, ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಅಧಿಕಾರಕ್ಕಾಗಿ ಬೆನ್ನಟ್ಟಿ ಹೋಗಬೇಡಿ ಎಂದು ಮನವಿ ಮಾಡಿದ ಮೊಯ್ಲಿ, ಪಕ್ಷಕ್ಕೆ ರಾಜ್ಯದಲ್ಲಿ ಸ್ಪಷ್ಟ ಜನಾದೇಶ ನೀಡುವವರೆಗೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವಂತಹ ಕೆಲಸ ಮಾಡಬಾರದು ಎಂದು ಹೇಳಿದರು. ಅಲ್ಲದೇ 2014ಕ್ಕೆ ಯುವರಾಜನೆಂದೇ ಬಿಂಬಿಸಲ್ಪಟ್ಟಿರುವ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಪಟ್ಟ ಎಂಬುದಾಗಿಯೂ ಹೇಳಿದರು. ಆ ಕಾರಣಕ್ಕಾಗಿ ಎಲ್ಲರೂ ಪಕ್ಷದ ಏಳಿಗಾಗಿ ದುಡಿಯಬೇಕು ಎಂದು ತಿಳಿಸಿದರು.
ಮೊಯ್ಲಿಯವರು ತಿರುಕನ ಕನಸು ಕಾಣುತ್ತಿದ್ದಾರೆ-ಧನಂಜಯ್ ಟೀಕೆ: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮೊಯ್ಲಿಯವರು ಇಂತಹ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಧನಂಜಯ್ ಕುಮಾರ್ ಅವರು ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ಕೊಡುವುದು ಮಾಮೂಲಿ. ಆದರೆ ಚುನಾವಣೆ ಇಲ್ಲದಿರುವಾಗ ಮೊಯ್ಲಿಯವರು ಇಂತಹ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಹುಷ ಮೊಯ್ಲಿಯವರು ತಿರುಕನ ಕನಸು ಕಾಣುತ್ತಿದ್ದಾರೇನೋ ಎಂದು ವ್ಯಂಗ್ಯವಾಡಿದರು.
ದೂರದ ಮಂಗಳೂರಿನಿಂದ ವಲಸೆ ಹೋದ ಮೊಯ್ಲಿಯವರು ಚಿಕ್ಕಮಗಳೂರಿನಲ್ಲಿ ಅದೃಷ್ಟವಶಾತ್ ಗೆಲುವು ಸಾಧಿಸಿದ್ದಾರೆಂದ ಕೂಡಲೇ ಇಂತಹ ವಿಚಿತ್ರ ಹೇಳಿಕೆ ನೀಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಧನಂಜಯ್ ಹೇಳಿದರು.