ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿಗೆ ಇತ್ತೀಚೆಗೆ ಸದನ ಸಮಿತಿ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ, ಸಂಪಂಗಿ ವಿರುದ್ಧದ ಅಮಾನತು ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಾಪಸ್ ಪಡೆದಿದ್ದಾರೆ.
2009ರ ಜನವರಿಯಲ್ಲಿ ಶಾಸಕ ವೈ.ಸಂಪಂಗಿ ಅವರು ವಿಧಾನಸೌಧದ ಕಚೇರಿಯಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಇದರಿಂದ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಬಿಜೆಪಿ ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡ, ಸಂಪಂಗಿ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರು.
ಶಾಸಕರ ಲಂಚ ಪ್ರಕರಣವನ್ನು ಸದನ ಸಮಿತಿಯಿಂದ ತನಿಖೆ ನಡೆಸಲಾಗಿತ್ತು. ಕೊನೆಗೂ ವೈ.ಸಂಪಂಗಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
ಇದೀಗ ಪಕ್ಷದ ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರು ಅಧಿಕಾರ ವಹಿಸಿಕೊಂಡ ನಂತರ ಕೆಲ ಸಚಿವರು, ಶಾಸಕರು, ಶಾಸಕ ಸಂಪಂಗಿ ವಿರುದ್ಧದ ಶಿಸ್ತಿನ ಕ್ರಮ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಈ ನೆಲೆಯಲ್ಲಿ ಶಾಸಕರ ಅಮಾನತು ಹಿಂದಕ್ಕೆ ಪಡೆದಿದ್ದಾರೆ.