ನೈಸ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಹೋರಾಟ ಕೇವಲ ಮೊಸಳೆ ಕಣ್ಣೀರು ಮತ್ತು ಚುನಾವಣೆಗಾಗಿ ಮಾಡಿದ ತಂತ್ರವಾಗಿತ್ತು ಎಂಬುದು ಚುನಾವಣಾ ಫಲಿತಾಂಶದಿಂದ ಶ್ರುತಪಟ್ಟಿದೆ ಎಂದು ಬಿಜೆಪಿ ಟೀಕಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ನಂತರ ಅದರ ಮೊತ್ತ ಮೊದಲ ಅಧಿಕಾರ ಬಿಜೆಪಿ ಕೈಗೆ ಬಂದಿರುವುದು ಜನರು ಅಭಿವೃದ್ಧಿಯನ್ನು ಗುರುತಿಸಿದ್ದಾರೆ ಎಂಬುದರ ಸಂಕೇತ ಎಂದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಯಶವಂತಪುರ ಬಿಜೆಪಿ ಶಾಸಕಿ, ಮಾಜಿ ಸಚಿವೆ ಶೋಭ ಕರಂದ್ಲಾಜೆ ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ, ನಮ್ಮದು ಪ್ರಾಮಾಣಿಕ ಹೋರಾಟವಾಗಿತ್ತು. ರೈತರು ಜೆಡಿಎಸ್ನ ರಾಜಕೀಯ ಆಟಕ್ಕೆ ಮರುಳಾಗಿಲ್ಲ ಎಂದು ಹೇಳಿದರು.
ಅವರ ಪ್ರತಿಕ್ರಿಯೆಗೆ ಪ್ರಮುಖ ಕಾರಣವೆಂದರೆ, ನೈಸ್ ರಸ್ತೆ ಬಗ್ಗೆ ಸಾಕಷ್ಟು ರಾಜಕೀಯ ಕೋಲಾಹಲ ನಡೆದು, ಬಿಜೆಪಿ-ಜೆಡಿಎಸ್ ನಡುವಿನ ಪ್ರತಿಷ್ಠೆಯ ಸಮರವಾಗಿ ಇದು ಪರಿಣಮಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಯುದ್ದಕ್ಕೆ ಸುಮಾರು 35 ವಾರ್ಡ್ಗಳು ಬಿಬಿಎಂಪಿ ಚುನಾವಣಾ ಕಣದಲ್ಲಿ ಭಾರಿ ಕುತೂಹಲ ಕೆರಳಿಸಿದ್ದವು. ಇದೀಗ ಇವುಗಳಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿ ಪಾಲಾಗಿದ್ದು, ಉಳಿದವು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿ ಹೋಗಿವೆ.
ಯಶವಂತಪುರ, ಪದ್ಮನಾಭ ನಗರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಈ ವಾರ್ಡ್ನ ಮತದಾರರನ್ನು ಗಮನದಲ್ಲಿಟ್ಟುಕೊಂಡೇ ರಾಜಕೀಯ ಪಕ್ಷಗಳೆಲ್ಲವೂ ಕಳೆದ ಮೂರ್ನಾಲ್ಕು ತಿಂಗಳಿಂದ ಸಾಕಷ್ಟು ಕಸರತ್ತು ನಡೆಸಿದ್ದವು. ರೈತರ ಧರಣಿ, ಪ್ರತಿಭಟನೆ, ರಾಜಕೀಯ ಮುಖಂಡರ ಕೂಗಾಟ, ಗದ್ದಲ ಇತ್ಯಾದಿ ಎಲ್ಲವನ್ನೂ ಈ ವಾರ್ಡ್ಗಳು ಕಂಡಿದ್ದವು. ಈ ವ್ಯಾಪ್ತಿಯಲ್ಲಿ ರೈತ ಕುಟುಂಬಗಳೇ ಹೆಚ್ಚಿರುವುದು ಜೆಡಿಎಸ್ನ ಹೋರಾಟದ ಕಾವು ಏರಲು ಕಾರಣವಾಗಿತ್ತು ಎಂಬುದು ಬಿಜೆಪಿ ಟೀಕೆಯಾಗಿತ್ತು. ಅಂದರೆ ನೈಸ್ ರಸ್ತೆಗೆ ತಮ್ಮ ಜಮೀನು, ಹೊಲ ಗದ್ದೆ ಬಿಟ್ಟುಕೊಟ್ಟ ಕುಟುಂಬಗಳೇ ಇಲ್ಲಿದ್ದವು.