ಬಿಬಿಎಂಪಿಯಲ್ಲಿ ಇದು ಬಿಜೆಪಿಗೆ ಸಂದ ಜಯವಲ್ಲ ಎಂದು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಹಣಬಲ ಮತ್ತು ತೋಳ್ಬಲಕ್ಕೆ ಸಂದ ಗೆಲುವಾಗಿದೆ ಎಂದು ಟೀಕಿಸಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿರುವ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಬಲದಿಂದಾಗಿ ಬಿಜೆಪಿ ಈ ಗೆಲುವನ್ನು ಸಾಧಿಸಿದೆ ಎಂದು ಆರೋಪಿಸಿದರು.
ಅಲ್ಲದೇ ಉದ್ಯಾನನಗರಿಯ ಪ್ರಜ್ಞಾವಂತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡದಿದ್ದರೆ ಇನ್ನೇನಾಗುತ್ತೆ ಎಂದು ಅಸಮಧಾನವ್ಯಕ್ತಪಡಿಸಿರುವ ಅವರು, ಇನ್ನು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ದೊರೆಯಬೇಕಾದರೆ ಕಡ್ಡಾಯ ಮತದಾನ ಮಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದರು.
ಆಡಳಿತಾರೂಢ ಬಿಜೆಪಿ ಪಕ್ಷ ಆಡಳಿತಯಂತ್ರದ ದುರುಪಯೋಗದಿಂದ ಅಕ್ರಮವಾಗಿ ಈ ಗೆಲುವು ಸಾಧಿಸಿದ್ದು, ಬೆಂಗಳೂರಿನ ಮತದಾರರಿಗೆ ಕೊಟ್ಟ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ಪ್ರಜ್ಞಾವಂತ ಮತದಾರ ಕೈಬಿಟ್ಟಿದ್ದಾನೆ-ದೇಶಪಾಂಡೆ: ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ನಗರದ ಪ್ರಜ್ಞಾವಂತ ಮತದಾರರು ತಮ್ಮ ಕೈ ಹಿಡಿಯಲಿದ್ದಾರೆಂಬ ವಿಶ್ವಾಸ ಇತ್ತು. ಆದರೆ ಮತದಾರನ ತೀರ್ಪಿಗೆ ತಲೆಬಾಗುವುದಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಎಷ್ಟು ಅಕ್ರಮ ನಡೆಸಲು ಸಾಧ್ಯವೋ ಅಷ್ಟು ಮೋಸ ಮಾಡುವ ಮೂಲಕ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಿರುವುದಾಗಿಯೂ ಈ ಸಂದರ್ಭದಲ್ಲಿ ದೂರಿದರು.