ಪಡಿತರ ಕಾರ್ಡ್ ಹಾಗೂ ವಿದ್ಯುಚ್ಛಕ್ತಿ ಮೀಟರ್ನ ಆರ್.ಆರ್.ನಂ. ನೀಡದವರಿಗೆ ಫೆಬ್ರುವರಿ 28ರಿಂದ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.
ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಪಡಿತರ ಕಾರ್ಡ್ ಹಾಗೂ ವಿದ್ಯುತ್ ಮೀಟರ್ನ ಆರ್.ಆರ್. ಸಂಖ್ಯೆ ನೀಡುವಂತೆ ನೀಡಲಾಗಿದ್ದ ಗಡುವನ್ನು ಮೂರು ಬಾರಿ ವಿಸ್ತರಣೆ ಮಾಡಲಾಗಿದ್ದು, ಫೆ.28ರ ನಂತರ ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಣೆ ಮಾಡದೆ, ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಿ ಅನಿಲ ಸಿಲಿಂಡರ್ ಪೂರೈಕೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 70 ಲಕ್ಷ ಗ್ಯಾಸ್ ಸಂಪರ್ಕ ಹೊಂದಿದ್ದ ಗ್ರಾಹಕರಿದ್ದು, ಅದರಲ್ಲಿ ಶೇ.20ರಿಂದ 25 ಲಕ್ಷ ಮಂದಿ ಅಕ್ರಮವಾಗಿ ಸಂಪರ್ಕ ಪಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಹಾಗೂ ಆಟೋಗಳಿಗೆ ಗ್ಯಾಸ್ ಏಜೆನ್ಸಿಯವರು ಪೂರೈಸುತ್ತಿದ್ದು, ಇದನ್ನು ತಡೆಗಟ್ಟಲು ಪಡಿತರ ಚೀಟಿ ಹಾಗೂ ಆರ್.ಆರ್.ಸಂಖ್ಯೆ ನೀಡುವುದರಿಂದ ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಸುಮಾರು 1 ಕೋಟಿ 60 ಲಕ್ಷ ಪಡಿತರ ಕಾರ್ಡುದಾರರಿದ್ದು, ಸುಮಾರು 60 ಲಕ್ಷ ನಕಲಿ ಕಾರ್ಡುದಾರರಿರುವುದು ತಿಳಿದು ಬಂದಿದೆ. ಗ್ಯಾಸ್ ಸಂಪರ್ಕ ಪಡೆಯಲು ನೀಡುವ ಪಡಿತರ ಚೀಟಿ ಹಾಗೂ ಆರ್.ಆರ್ನಿಂದಲೂ ನಕಲಿ ಪಡಿತರ ಕಾರ್ಡುದಾರರನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು.